ಕಲಘಟಗಿ: ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ-ಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗದೇ ಸಮಾಜದ ಸುಧಾರಣೆಗೆ ಸೋಪಾನವಾಗಿವೆ ಎಂದು ತಡಸ ಕ್ರಾಸ್ ತಿರುಮಲಕೊಪ್ಪ ರೇಣುಕ ಧರ್ಮನಿವಾಸ ಶ್ರೀ ದಾನಯ್ಯದೇವರು ಹೇಳಿದರು.
ಉಪನ್ಯಾಸ ನೀಡಿದ ಧಾರವಾಡ ಜೆ.ಎಸ್.ಎಸ್. ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರುದ್ರಗೌಡ ಪಾಟೀಲ ಮಾತನಾಡಿ, ವೀರಶೈವ ಧರ್ಮದ ಸಂಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯರ ಜೀವನ, ತತ್ವ ಸಿದ್ಧಾಂತಗಳು, ದೂರದರ್ಶಿತ್ವದ ವಿಚಾರಧಾರೆಗಳು ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಭದ್ರ ಬುನಾದಿ ಒದಗಿಸುತ್ತವೆ. ಜಂಗಮರು ಗುರುವಿನ ಸ್ಥಾನದಲ್ಲಿದ್ದು, ಮಕ್ಕಳಿಗೂ ಸಂಸ್ಕಾರ ಕಲಿಸಿ ಪರಂಪರೆ ಮುಂದುವರಿಸಬೇಕು ಎಂದು ಹೇಳಿದರು.
ಕಲಘಟಗಿ ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಅಭಿನವ ಮಡಿವಾಳ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಂಗಮ ಸಮಾಜದ ಮುಖಂಡ ಎಸ್.ವಿ. ತಡಸಮಠ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಬಾಬಣ್ಣ ಅಂಚಟಗೇರಿ, ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಅಜ್ಜಯ್ಯ ಹಿರೇಮಠ, ಚನ್ನಯ್ಯ ಹಿರೇಮಠ, ಐ.ಸಿ. ಗೋಕುಲ ಮಾತನಾಡಿದರು.ಜಂಗಮ ಸಮಾಜದ ನಗರ ಘಟಕದ ಅಧ್ಯಕ್ಷ ಶಿವಯ್ಯ ತೇಗೂರುಮಠ, ಮಹಾಲಿಂಗಯ್ಯ ಹಿರೇಮಠ, ಶಿವಪುತ್ರಯ್ಯ ತೇಗೂರಮಠ, ಮಹಾಂತೇಶ ತಹಶೀಲ್ದಾರ, ಗಂಗಾಧರ ಚಿಕ್ಕಮಠ, ವೀರೇಶ ಹಾರೋಗೇರಿ, ಸಂಗಮೇಶ ತೋಟಗಂಟಿ, ಜಗದೀಶ ವೀರಕ್ತಮಠ, ಜಮಖಂಡಿ ಸರ್, ಸಿದ್ದಯ್ಯ ಹಿರೇಮಠ, ಮಹಾಂತೇಶ ವೀರಕ್ತಮಠ, ಶಿವಾನಂದ ಹಿರೇಮಠ, ಶಂಕರಗೌಡ ಭಾವಿಕಟ್ಟಿ ಇತರರಿದ್ದರು.
ಗಮನ ಸೆಳೆದ ವೀರಗಾಸೆ:ರೇಣುಕಾಚಾರ್ಯ ಜಯಂತಿ ಅಂಗವಾಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಹನ್ನೆರಡು ಮಠದ ವರೆಗೆ ನಡೆಯಿತು. ಮುತ್ತೈದೆಯರಿಂದ ಕುಂಭಮೇಳ, ಪುರವಂತರಿಂದ ವೀರಗಾಸೆ, ಕರಡಿ ಮಜಲು, ಜಾಂಜಮೇಳ ಹಾಗೂ ವಿವಿಧವಾಧ್ಯ ಮೇಳಗಳೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜರುಗಿತು.