ಹದಗೆಟ್ಟ ಎಲ್ಲ ರಸ್ತೆಗಳ ದುರಸ್ತಿ: ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Oct 16, 2024, 12:51 AM IST
15ಕೆಪಿಎಲ್22 ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ 7.50 ಕೋಟಿ ವೆಚ್ಚದ ಕವಲೂರು -ಬನ್ನಿಕೊಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. | Kannada Prabha

ಸಾರಾಂಶ

ಅತಿಯಾದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿದ್ದು, ಅಷ್ಟು ರಸ್ತೆಗಳನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು.

₹48.18 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅತಿಯಾದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿದ್ದು, ಅಷ್ಟು ರಸ್ತೆಗಳನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ತಾಲೂಕಿನ ಅಳವಂಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗುಡುಗೇರಿ, ಕವಲೂರು, ಮುರ್ಲಾಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸ್ಲಾಪುರ, ರಘುನಾಥನಹಳ್ಳಿ, ಅಳವಂಡಿ ಹಾಗೂ ಕಂಪ್ಲಿ ಗ್ರಾಮಗಳಲ್ಲಿ ಅಂದಾಜು ಮೊತ್ತ ₹48.18 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಅನೇಕ ಕಡೆ ರಸ್ತೆಗಳು ಹಾಳಾಗಿವೆ. ಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳಿಗೆ ಅನುದಾನ ಮಿಸಲಿಟ್ಟು ಅಭಿವೃದ್ಧಿ ಪಡಿಸುತ್ತೇವೆ. ಇಂದು ಬಹುದಿನಗಳ ಬೇಡಿಕೆ ಆಗಿದ್ದ ಕವಲೂರು-ಬನ್ನಿಕೊಪ್ಪ ರಸ್ತೆ ಅಭಿವೃದ್ಧಿಗೆ ₹7.50 ಕೋಟಿ ಅನುದಾನ, ಕವಲೂರು -ಘಟ್ಟರಡ್ಡಿಹಾಳ ರಸ್ತೆಗೆ ₹3.50 ಕೋಟಿ, ಕವಲೂರು-ಮುರ್ಲಾಪುರ ರಸ್ತೆ ಅಭಿವೃದ್ಧಿಗೆ ₹2.19 ಕೋಟಿ, ಹೈದರ್ ನಗರ -ಹಟ್ಟಿ -ಕೇಸ್ಲಾಪುರ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಕವಲೂರು ಬನ್ನಿಕೊಪ್ಪ ವ್ಹಾಯಾ ಗುಡುಗೇರಿ ರಸ್ತೆ ಅಭಿವೃದ್ಧಿಗೆ ₹2.25 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿ, ಉತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕೆರೆ ತುಂಬಿಸುವ ಯೋಜನೆಗೆ ಅಡಿಗಲ್ಲು:

ಬಳಿಕ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿಯಲ್ಲಿ 22.18 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬಿಸುವ ಯೋಜನೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು. ನಂತರ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಹಿನ್ನೀರನ್ನು ಉಪಯೋಗಿಸಿಕೊಂಡು ಕವಲೂರಿನ 3 ಕೆರೆ, ಮುರ್ಲಾಪುರದ 1 ಕೆರೆ, ಘಟ್ಟರಡ್ಡಿಹಾಳದ 1 ಕೆರೆ, ಬೆಳಗಟ್ಟಿಯ 1 ಕೆರೆ, ಹಟ್ಟಿಯ 1 ಕೆರೆ, ಅಳವಂಡಿಯ 2 ಕೆರೆ, ಬೆಟಗೇರಿಯ 1 ಕೆರೆ, ಹಿರೇಸಿಂದೋಗಿಯ 1 ಕೆರೆ ಕೋಳೂರು ಹಾಗೂ ಹಂದ್ರಾಳ ಕೆರೆಗಳನ್ನು ತುಂಬಿಸಲಾಗುತ್ತದೆ ಎಂದರು.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತನಾಡಿದ್ದೇನೆ. ಅನುದಾನ ಮಂಜೂರು ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಜಾರಿ ಆದರೆ 16,523 ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ. ಈ ಯೋಜನೆ ಜಾರಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ಈ ರಾಜ್ಯಕಂಡ ಧೀಮಂತ ನಾಯಕ. 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡದೆ ಆಡಳಿತ ನಡೆಸಿದ ನಾಯಕ. ಮುಡಾ ಹಗರಣದಲ್ಲಿ ಅವರದ್ದು ಯಾವುದೇ ರೀತಿಯ ಪಾತ್ರ ಇಲ್ಲ, ಇನ್ನುಳಿದ ಅವಧಿಗೂ ಅವರೇ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಲಿದ್ದಾರೆ ಎಂದರು.

ಮಾಜಿ ಸಂಸದ ಕರಡಿ ಸಂಗಣ್ಣ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ರಡ್ಡಿ ಗಲಬಿ, ಭರಮಪ್ಪ ಹಟ್ಟಿ, ಗ್ಯಾರಂಟಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ವೆಂಕನಗೌಡ ಹಿರೇಗೌಡ್ರು, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ, ಮುತ್ತಣ್ಣ ಕವಲೂರು, ಗುರು ಬಸಸವರಾಜ ಹಳ್ಳಿಕೇರಿ, ಅನ್ವರ್ ಗಡಾದ್, ರಾಜಶೇಖರ್ ಅಡೂರ್, ಶಿವಕುಮಾರ್ ಶೆಟ್ಟರ್, ಹಣಮೇಶ್ ಹೊಸಳ್ಳಿ, ತೋಟಪ್ಪ ಹಟ್ಟಿ, ಡಿವೈಎಸ್ಪಿ ಮುತ್ತಣ್ಣ, ಸಿಪಿಐ ಸುರೇಶ ದೊಡ್ಡಮನಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಒ ದುಂದೇಶ್ ತುರಾದಿ, ಮಲ್ಲು ಪೂಜಾರ್, ಮಹಾಂತೇಶ್ ಕವಲೂರು, ದೇವಪ್ಪ ಹಳ್ಳಿ, ನಜೀರ್ ಅಳವಂಡಿ, ಸುರೇಶ ದಾಸರೆಡ್ಡಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ