ಗೋಕರ್ಣ: ಫೆ. ೧೧ರಿಂದ ಪ್ರಾರಂಭವಾಗಲಿರುವ ಶಿವರಾತ್ರಿ ಜಾತ್ರಾ ಮಹೋತ್ಸವದ ಸಿದ್ಧತಾ ಸಭೆ ಇಲ್ಲಿನ ಗ್ರಾಪಂ ಸಭಾಭವನದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಕುಡಿಯುವ ನೀರನ್ನು ವಿವಿಧ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇಡಲು ಸೂಚಿಸಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ೨೪ ಗಂಟೆ ಕೌಂಟರ್ ತೆರೆದು ಸೇವೆ ನೀಡುವುದು ಹಾಗೂ ಸ್ವಚ್ಛತೆಯ ಬಗ್ಗೆ, ಅನ್ನದಾನ ವ್ಯವಸ್ಥೆಯಲ್ಲಿ ಆಹಾರ ಪರೀಕ್ಷೆ ನಡೆಸಲು ಸೂಚಿಸಲಾಯಿತು. ಯಾತ್ರಿಕರಿಗೆ ಹಠಾತ್ ಅನಾರೋಗ್ಯಕ್ಕೆ ಒಳಗಾದರೆ ಅಂಗಡಿ ಮುಂಗಟ್ಟುಗಳಿರುವ ಮಾರ್ಗದಲ್ಲಿ ಮಿನಿ ಆ್ಯಂಬುಲೆನ್ಸ್ ನಿಯೋಜಿಸುವ ಅಗತ್ಯದ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಪ್ರಸ್ತಾಪಿಸಿದರು.ಪ್ರಮುಖ ರಸ್ತೆಗಳಲ್ಲಿನ ಹೊಂಡ ಮುಚ್ಚಿ ಸರಿಪಡಿಸಿ ಸುಸ್ಥಿತಿಯಲ್ಲಿರುವ ಕುರಿತು ಚರ್ಚೆ ನಡೆಯಿತು. ರಥಬೀದಿಯಲ್ಲಿನ ಡಾಂಬರು ರಸ್ತೆಯ ಹೊಂಡವನ್ನು ಸಿಮೆಂಟ್ನಿಂದ ಮುಚ್ಚಿದ್ದು, ಅದು ಕಿತ್ತು ಬೀಳುತ್ತಿದೆ. ಇದರಿಂದ ಮಹಾಬಲೇಶ್ವರ ಮಂದಿರದ ರಥೋತ್ಸವಕ್ಕೂ ತೊಡಕಾಗುತ್ತದೆ ಎಂದು ಸಂತೋಷ ಅಡಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ನೂತನ ರಸ್ತೆ ನಿರ್ಮಾಣದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಮ್ಮಿಂದ ದುರಸ್ತಿ ಕಾರ್ಯ ಅಸಾಧ್ಯ ಎಂದರು. ಸಾರ್ವಜನಿಕರ ಆಗ್ರಹದ ಮೇರೆಗೆ ಸ್ವಂತ ಹಣದಿಂದ ತಾತ್ಕಾಲಿಕ ದುರಸ್ತಿ ಮಾಡಿಸಿದ್ದಾಗಿ ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಹೇಳಿದರು.
ಗ್ರಾಪಂ ಸದಸ್ಯ ರಮೇಶ ಪ್ರಸಾದ ಮಾತನಾಡಿ, ಮುಂಡಬಸವ ಮಂದಿರ, ಭದ್ರಕಾಳಿ ಮಂದಿರ, ಷಡಕ್ಷರೇಶ್ವರ ಮಂದಿರದ ಮುಂಭಾಗದಲ್ಲಿ ರಸ್ತೆ ಹೊಂಡ ಬಿದ್ದಿದ್ದು, ಇದನ್ನಾದರೂ ಮುಚ್ಚಿ ಎಂದು ಆಗ್ರಹಿಸಿದರು.ಕೋಟಿತೀರ್ಥ, ಕಡಲತೀರದಲ್ಲಿ ಭಕ್ತರ ಸುರಕ್ಷತೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆಯ ಸಿಬ್ಬಂದಿ, ಬೋಟ್, ಜೀವರಕ್ಷಕ ಸಿಬ್ಬಂದಿ ಮತ್ತಿತರ ಪರಿಕರ ಒದಗಿಸಲು ಸೂಚಿಸಲಾಯಿತು.
ಯಾತ್ರಿಕರಿಗೆ ಸರಿಯಾದ ಬಸ್ ವ್ಯವಸ್ಥೆ, ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮತ್ತಿತರ ಸೂಕ್ತ ಅನುಕೂಲತೆ ಕಲ್ಪಿಸಲು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. ದೇವಾಲಯದ ವ್ಯಾಪ್ತಿ ಹಾಗೂ ರಥಬೀದಿ ರೆಡ್ ಝೂನ್ ಆಗಿರುವುದರಿಂದ ಇಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧಿಸಲಾಗಿದೆ. ಆದರೂ ಬಳಕೆ ಮಾಡಿದ್ದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಯಿತು.ಜಾತ್ರಾ ಸಮಯದಲ್ಲಿ ಅಗ್ನಿಶಾಮಕ ವಾಹನ ಇಡುವ ಕುರಿತು ಸಭೆಯಲ್ಲಿ ಚರ್ಚೆ ನಡೆದು, ಅಗ್ನಿಶಾಮಕ ವಾಹನವನ್ನು ಕುಮಟಾ ಘಟಕದಿಂದ ಪಡೆದರೆ ಅದಕ್ಕೆ ನಿಗದಿ ಹಣ ತುಂಬ ಬೇಕಾಗುತ್ತದೆ, ಇದನ್ನು ಅಗತ್ಯ ಸೇವೆ ಎಂದು ಗುರುತಿಸಿ ಶುಲ್ಕರಹಿತ ಮಾಡಬೇಕು, ಅಲ್ಲದೇ ಶಾಶ್ವತ ಅಗ್ನಿಶಾಮಕ ಠಾಣೆ ಇಲ್ಲಿ ಇರಬೇಕು ಎಂಬ ಆಗ್ರಹ ಕೇಳಿಬಂತು.
ಸಭೆಯಲ್ಲಿ ಕುಮಟಾ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಎಲ್. ಭಟ್, ಪಿಎಸ್ಐ ಅನಿಲ ಉಪಸ್ಥಿತರಿದ್ದರು. ಪಿಡಿಒ ವಿ.ಎ. ಪಟಗಾರ, ಕಾರ್ಯದರ್ಶಿ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.ಕಂದಾಯ, ಆರೋಗ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಪ್ರವಾಸೋದ್ಯಮ, ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
ಅನುದಾನ ನೀಡಿ: ಕಳೆದ ವರ್ಷ ಮುರ್ಡೇಶ್ವರದಲ್ಲಿ ಜಿಲ್ಲಾಡಳಿತ ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮ ಆಯೋಜಿಸಿ, ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿತ್ತು. ಆತ್ಮಲಿಂಗವಿರುವ ಜಗತ್ತಿನ ಏಕೈಕ ಸ್ಥಳವಾದ ಇಲ್ಲಿಗೆ ಈ ಬಾರಿ ಅನುದಾನ ನೀಡಬೇಕು ಎಂದು ಗ್ರಾಪಂ ಸದಸ್ಯ ಗಣಪತಿ ನಾಯ್ಕ ಆಗ್ರಹಿಸಿದರು. ಅದೇ ಹಣದಲ್ಲಿ ಅಗತ್ಯವಿರುವ ಸೌಲಭ್ಯವನ್ನು ಜಾತ್ರಾ ಸಮಯದಲ್ಲಿ ಒದಗಿಸಲು ಅನುಕೂಲವಾಗುತ್ತದೆ ಎಂದರು.