ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾ ಜಲಾಶಯದ ಪವರ್ ಹೌಸ್ ಪಕ್ಕದಲ್ಲಿ ಇದ್ದ ರಿವರ್ ಗೇಟ್ಗಳಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಸುಮಾರು 5 ಇಂಚಿನಷ್ಟು ತೆರೆದುಕೊಂಡಿದ್ದವು. ಇದರಿಂದ ಸುಮಾರು 1500 ರಿಂದ 2 ಸಾವಿರ ಕ್ಯೂಸೆಕ್ಸ್ ನೀರು ಹೊಳೆಗೆ ಹರಿದು ಹೋಗುತ್ತಿತ್ತು. ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಗೇಟ್ ಬಂದ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ನಿರಂತರ ಶ್ರಮದಿಂದ ಗೇಟ್ ಬಂದ್ ಮಾಡಲಾಗಿದ್ದು, ನೀರು ಪೋಲು ತಡೆಯಲಾಗಿದೆ.
ಮಧ್ಯ ಕರ್ನಾಟಕದ ಜೀವನಾಡಿಯಾದ ಭದ್ರಾ ಡ್ಯಾಮ್ನಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಸೋರಿಕೆಯಾಗುತ್ತಿತ್ತು. ಇದರಿಂದ ಆತಂಕಗೊಂಡ ಅಚ್ಚುಕಟ್ಟು ಪ್ರದೇಶದ ರೈತರು ಎರಡು ದಿನದ ಹಿಂದೆ ಕಾಡ್ ಅಧ್ಯಕ್ಷರ ಸಮ್ಮುಖದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಬಾರಿ ಕಳೆದ ವರ್ಷಕ್ಕಿಂತಲೂ ಕನಿಷ್ಟ ನೀರು ಸಂಗ್ರಹ ಇರುವ ಸಂದರ್ಭದಲ್ಲಿ ರೈತರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಲಾಗದೆ ಡ್ಯಾಂನ ಅಧಿಕಾರಿಗಳು ಮಳೆಗಾಲದಲ್ಲಿ ಗೇಟ್ಗಳ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದರು. ಸ್ಲೀವ್ಸ್ ಗೇಟ್ ರಿಪೇರಿ ಮಾಡುವಾಗ ಗೇಟ್ ಅನ್ನು ಮೇಲಕ್ಕೆ ಎತ್ತಿದ ಸಂದರ್ಭದಲ್ಲಿ ಮತ್ತೆ ಪುನಃ ಅದನ್ನು ಸ್ಥಳಕ್ಕೆ ಸೇರಿಸಲು ಸಾಧ್ಯವಾಗದೆ ಅಧಿಕಾರಿಗಳು ಕೈ ಚೆಲ್ಲಿದರು. ಹೀಗಾಗಿ ಜಲಾಶಯದಿಂದ ಹಿಂದಿನಲ್ಲಿ ಸಂಗ್ರಹವಾಗುತ್ತಿದ್ದ ನೀರು ಸಂಪೂರ್ಣವಾಗಿ ಸ್ಲೀವ್ಸ್ ಗೇಟ್ನಿಂದ ನದಿಗೆ ಸೋರಿಕೆಯಾಗುತ್ತಿತ್ತು. ಇದರಿಂದ ಅಧಿಕಾರಿಗಳು ಸ್ಲೀವ್ಸ್ ಗೇಟ್ ರಿಪೇರಿಗೆ ಮುಂದಾದರೂ ಕೂಡ ತಾಂತ್ರಿಕ ತಜ್ಞರ ಸಲಹೆ ಮತ್ತು ಕೊರತೆ ಎದ್ದು ಕಾಣುತ್ತಿತ್ತು.
ಇನ್ನು ಎರಡು ದಿನದಲ್ಲಿ ತಡೆಗಟ್ಟದೆ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡವಾಗಬೇಕಿತ್ತು. ಆದರೆ, ಗುತ್ತಿಗೆದಾರ ಹಾಗೂ ದಿನಗೂಲಿ ನೌಕರರ ಅನುಭವಿ ತಂಡ ಕಾರ್ಯಾಚರಣೆಯಿಂದ ನೀರು ಸೋರಿಕೆ ತಪ್ಪಿದೆ.
ಮಳೆಗಾಲಕ್ಕೂ ಮುನ್ನ ಜಲಾಶಯಗಳ ಗೇಟ್ಗಳ ನಿರ್ವಹಣೆ, ತಾಂತ್ರಿಕ ದೋಷಗಳ ಪರಿಶೀಲನೆ ನಡೆಸಲಾಗುತ್ತದೆ. ಆದರೆ ಭದ್ರಾ ಜಲಾಶಯದಲ್ಲಿ ಅಧಿಕಾರಿಗಳು ಮಳೆ ಶುರುವಾಗಿ, ಒಳ ಹರಿವು ಆರಂಭವಾದ ಮೇಲೆ ನಿರ್ಹವಣೆ ಆರಂಭಿಸಿದ್ದರು. ಈ ವೇಳೆ ರಿವರ್ ಗೇಟ್ನಲ್ಲಿ (ಸ್ಲೂಯಿಸ್ ಗೇಟ್) ತಾಂತ್ರಿಕ ಸಮಸ್ಯೆ ಉಂಟಾಗಿ ಮುಚ್ಚಲಾಗದ ಸ್ಥಿತಿಗೆ ತಲುಪಿತ್ತು. ಇದರಿಂದ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ಅನಾಯಾಸವಾಗಿ ಹೊಳೆಗೆ ಹರಿದು ಹೋಗುತ್ತಿತ್ತು.
ಕಾಯಂಗೊಳಿಸಲು ದಿನಗೂಲಿ ನೌಕರರ ಮನವಿ: