ಕೊಪ್ಪಳ: ಅಲ್ಪಸಂಖ್ಯಾತ ವಿರೋಧಿ ಮತ್ತು ಜನವಿರೋಧಿ ಕಾಯ್ದೆ ರದ್ದುಪಡಿಸುವುದು ಮತ್ತು 4% ಮುಸ್ಲಿಂ ಮೀಸಲಾತಿ ಮರುಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆಯಿಂದ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ. ಗೋ ಸಾಗಾಣಿಕದಾರರ ಮೇಲೆ ಪೊಲೀಸರಿಂದ ಶೂಟೌಟ್, ಮನೆ-ಮುಗ್ಗಟ್ಟುಗಳ ಜಪ್ತಿ ಮುಂತಾದ ಕಳವಳಕಾರಿ ಘಟನೆಗಳು ನಡೆದಿರುವುದು ಆತಂಕಕಾರಿಯಾಗಿದೆ. ಈ ಕರಾಳ ಕಾನೂನಿನಿಂದ ರೈತರು ತಾವು ಬೆಳೆಸಿದ ಜಾನುವಾರು ಮಾರಾಟ ಮಾಡಲು ಸಾಧ್ಯವಾಗದೆ, ತಮ್ಮ ನೆಚ್ಚಿನ ಕೃಷಿ ಜಾನುವಾರು ಸಾಕಾಣಿಕೆ ಮುಂದುವರೆಸಲಾಗದೆ ಕಂಗಾಲಾಗಿದ್ದಾರೆ. ಇದು ರೈತ ಸಮುದಾಯಕ್ಕೆ ಅನ್ಯಾಯವನ್ನುಂಟು ಮಾಡಿದೆ. ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆಯ ನೆಪ ಇಟ್ಟುಕೊಂಡು ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಯಾವುದೇ ಒತ್ತಡವಿಲ್ಲದೆ, ತಮಗೆ ಬೇಕಾದ ಧರ್ಮ ಒಪ್ಪಿ,ಆ ಪ್ರಕಾರ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಆದರೆ ಈ ಕಾನೂನು ಚಾಲ್ತಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ ಮತ್ತು ಇದು ಸಂಘ ಪರಿವಾರದ ಕೋಮು ಅಜೆಂಡಾದ ಭಾಗವಾಗಿದೆ ಎಂದರು.ಚುನಾವಣೆ ಪ್ರಣಾಳಿಕೆಯ ಆಶ್ವಾಸನೆ ನೀಡಿದಂತೆ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ಇಂತಹ ಕರಾಳ ಮತ್ತು ಜನವಿರೋಧಿ ಕಾನೂನು ಹಿಂದಕ್ಕೆ ಪಡೆಯುವ ಬಗ್ಗೆ ಸ್ಪಷ್ಟವಾದ ಆಶ್ವಾಸನೆ ನೀಡಿತ್ತು. ಆದ್ದರಿಂದ, ಪ್ರಸ್ತುತ ಸರ್ಕಾರವು ತನ್ನ ಭರವಸೆ ಈಡೇರಿಸುವ ತುರ್ತು ಅವಶ್ಯಕತೆಯಿದೆ. ಕಳೆದ ಸರ್ಕಾರವು ರದ್ದುಪಡಿಸಿದ 4% ಮುಸ್ಲಿಂ ಮೀಸಲಾತಿ ತಕ್ಷಣವೇ ಮರುಸ್ಥಾಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಮೊಹಮ್ಮದ್ ಅಲೀಮುದ್ದೀನ, ರಾಜ್ಯ ಮಹಿಳಾ ಅಧ್ಯಕ್ಷ ಸಬಿಹಾ ಪಟೇಲ್, ನಾಸಿರ ಮಾಳೆಕೊಪ್ಪ ಹಾಗೂ ಅಹ್ಮದ್ ಖಾನ್ ಹಾಗೂ ಇತರರು ಉಪಸ್ಥಿತರಿದ್ದರು.