ಮೂಡುಬಿದಿರೆ: ಕ್ರಿಯಾಶೀಲ ನ್ಯಾಯಾಂಗದಿಂದ ಸದೃಢ ಪ್ರಜಾಪ್ರಭುತ್ವ. ಜಾತಿ ಮತ ಮೀರಿದ ಬಾಂಧವ್ಯ ಹಾಗೂ ಸಮಾನತೆಯೇ ದೇಶದ ಸುಭದ್ರತೆಯ ಅಡಿಪಾಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು, ಸ್ಥಳೀಯರು ಸೇರಿದಂತೆ 30 ಸಾವಿರಕ್ಕೂ ಅಧಿಕ ಜನಸಮೂಹ ದೇಶಭಕ್ತಿಯ ಕಹಳೆ ಮೊಳಗಿಸಿತು.
ಇದಕ್ಕೂ ಮೊದಲು, ವಂದೇ ಮಾತರಂ ಮೊಳಗಿದ ಬಳಿಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತ್ರಿವರ್ಣ ಧ್ವಜ ಆರೋಹಣ ಮಾಡಿದ್ದು, ಬಳಿಕ ರಾಷ್ಟ್ರಗೀತೆ ಮೊಳಗಿತು. ವೇದಿಕೆಯ ಬಾನೆತ್ತರದಲ್ಲಿ ತಿರಂಗಾ ಹಾರಾಡಿದರೆ, ಸಭಾಂಗಣದಲ್ಲಿ ನಿಂತ ವಿದ್ಯಾರ್ಥಿಗಳು ತ್ರಿವರ್ಣದಲ್ಲಿ ‘ಭಾರತ್’ ಮೂಡಿಸುವ ಮೂಲಕ ದೇಶಪ್ರೇಮ ಸಾರಿದರು. ಆಳ್ವಾಸ್ ಸಂಸ್ಥೆಯ 6257 ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತವನ್ನು ಮೂಡಿಸಿದರು.ಸಾಂಸ್ಕೃತಿಕ ಗಾಯನ ತಂಡವು ಕೋಟಿ ಕಂಠೋಸೇ ಗಾನ ಹಾಡಿದಾಗ ಸಭಾಂಗಣದಲ್ಲಿ ಸೇರಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಎಲ್ಲರೂ ತ್ರಿವರ್ಣ ರಾಷ್ಟ್ರ ಧ್ವಜ ಬೀಸಿ ದೇಶದ ಪ್ರೀತಿಯನ್ನು ಸಾದರ ಪಡಿಸಿದರು. ವೇದಿಕೆಗೆ ಬಂದ ತ್ರಿವರ್ಣ ಸಿಂಹ ವೇಷ ವಿಶೇಷ ಮೆರುಗು ನೀಡಿದವು.ಸುಮಾರು 300 ಕ್ಕೂ ಅಧಿಕ ಮಾಜಿ ಸೈನಿಕರೂ ಧ್ವಜಕ್ಕೆ ವಂದನೆ ಸಲ್ಲಿಸಿದರು. ಬಾನಂಗಳಕ್ಕೆ ತ್ರಿವರ್ಣ ರಂಗು ಬ್ಲೋವರ್ ಮೂಲಕ ಚಿಮ್ಮಿ ಬಂತು.ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ ಅವರಿಂದ ಗೌರವ ಶ್ರೀರಕ್ಷೆ ಸ್ವೀಕರಿಸಿದ ನ್ಯಾಯಮೂರ್ತಿ ಅವರು, ಬ್ಯಾಂಡ್ ಹಾಗೂ ಗೌರವಗಳೊಂದಿಗೆ ವೇದಿಕೆಗೆ ಬಂದರು. ಸೀನಿಯರ್ ಅಂಡರ್ ಆಫೀಸರ್ ಯದುನಂದನ್ ಪರೇಡ್ ವರದಿ ಸಲ್ಲಿಸಿದರು. ಕರ್ನಾಟಕ ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅಕ್ಷಯ್ ಹೆಗ್ಡೆ ಅವರಿಗೆ 2 ಲಕ್ಷ ರು. ನೀಡಿ ಗೌರವಿಸಲಾಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ್ ಆಳ್ವ ಶ್ರೀಪತಿ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಇದ್ದರು.
ಫ್ಲ್ಯಾಗ್ ಏರಿಯಾದಲ್ಲಿ ವಸುದೈವ ಕುಟುಂಬಕಂ ಪರಿಕಲ್ಪನೆಯ ಮಣ್ಣಿನ ಕಲಾಕೃತಿ ಎಲ್ಲರ ಗಮನ ಸೆಳೆಯಿತು.ಉಪನ್ಯಾಸಕ ರಾಜೇಶ್ ಡಿ’ಸೋಜಾ ಹಾಗೂ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ನಿರ್ವಹಿಸಿದರು.