ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ ಪ್ರಸ್ತುತ ಮಂಜೂರು ಇರುವ ಹುದ್ದೆಗಳಲ್ಲಿ ಸಾಕಷ್ಟು ಖಾಲಿ ಇವೆ
ಕುಕನೂರು: ಸ್ಥಳೀಯ ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗಿದ್ದು, ಕೂಡಲೇ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಪಪಂ ಅಧ್ಯಕ್ಷೆ ಲಲಿತಾ ಪ್ರವೀಣಕುಮಾರ ಮುಧೋಳ ನೇತೃತ್ವದಲ್ಲಿ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಗೆ ಬುಧವಾರ ಮನವಿ ಸಲ್ಲಿಸಿದರು.
ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ ಪ್ರಸ್ತುತ ಮಂಜೂರು ಇರುವ ಹುದ್ದೆಗಳಲ್ಲಿ ಸಾಕಷ್ಟು ಖಾಲಿ ಇವೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯ ಹಾಗೂ ಅಭಿವೃದ್ಧಿ ಕುಂಠಿತಗೊಂಡಿದೆ. ಸಮುದಾಯ ಸಂಘಟನಾಧಿಕಾರಿ, ಕಿರಿಯ ಅಭಿಯಂತರರು, ಪ್ರಥಮ ದರ್ಜೆ ಸಹಾಯಕರು, ಕಿರಿಯ ಆರೋಗ್ಯ ನಿರೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು, ಕರವಸೂಲಿಗಾರರು, ನೀರು ಸರಬರಾಜು ಮೇಲ್ವಿಚಾರಕರು ಒಬ್ಬರಂತೆ ೭ ಹುದ್ದೆಗಳು ಖಾಲಿ ಇರುತ್ತವೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಅವಶ್ಯವಿರುವ ಸಿಬ್ಬಂದಿಗಳನ್ನು ಕೂಡಲೇ ಕಾರ್ಯಾಲಯಕ್ಕೆ ಸ್ಥಳ ನಿಯುಕ್ತಗೊಳಿಸಿ ಕಾರ್ಯಾದೇಶ ಹೊರಡಿಸಬೇಕು. ಅಲ್ಲದೇ ಈಗಾಗಲೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಅರುಣಕುಮಾರ ನಾಯ್ಕರ್ ಅವರು ಸಂಸದರ ಆಪ್ತ ಸಹಾಯಕರನ್ನಾಗಿ ನಿಯೋಜನೆ ಮಾಡಿದ್ದು, ಕೂಡಲೇ ರದ್ದು ಪಡಿಸಿ ಈ ಕಾರ್ಯಾಲಯಕ್ಕೆ ಮರು ನಿಯೋಜನೆ ಮಾಡಬೇಕು. ಕರವಸೂಲಿಗಾರ ಸಿ.ಮೋಹನ್ ವಾರದಲ್ಲಿ ೩ ದಿನ ಕರ್ತವ್ಯ ನಿರ್ವಹಿಸುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯಾಲಯಕ್ಕೆ ನಿಯೋಜನೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.