ಕಾರಟಗಿ: ಏಳನೇ ವೇತನ ಆಯೋಗ ವರದಿ ಯಥಾವತ್ ಜಾರಿಗೊಳಿಸಬೇಕು ಮತ್ತು ಎನ್ಪಿಎಸ್ ನೌಕರರನ್ನು ಒಪಿಎಸ್ಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ವೇಳೆ ಗಂಗಾವತಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಶರಣೇಗೌಡ ಹೇರೂರು ಮಾತನಾಡಿ, ರಾಜ್ಯದಲ್ಲಿ ಸಂಘವು ಒಟ್ಟು ಆರು ಲಕ್ಷ ನೌಕರರನ್ನು ಹೊಂದಿದ್ದು, ಇನ್ನೂ ೨.60 ಲಕ್ಷ ನೌಕರರ ಕೊರತೆ ಇದೆ. ಆರನೇ ವೇತನ ಆಯೋಗದ ವರದಿ ಅನುಷ್ಠಾನಗೊಂಡು ೨೦೨೨ಕ್ಕೆ ಐದು ವರ್ಷ ಪೂರ್ಣಗೊಂಡಿದೆ. ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಒಳಪಡಿಸಬೇಕಾಗಿತ್ತು.ಪೃಕೃತಿ ವಿಕೋಪ, ಕೋವಿಡ್, ಪ್ರವಾಹ ಸಂದರ್ಭದಲ್ಲಿ ಸಂಘ ಸರ್ಕಾರಕ್ಕೆ ನೆರವಾಗಿದೆ. ವಾರ್ಷಿಕ ₹೮೫೦೦ ಕೋಟಿ ಉಳಿತಾಯವಾಗುತ್ತಿದೆ. ವೇತನ ಆಯೋಗ ವರದಿ ಸಲ್ಲಿಸಿ ೪ ತಿಂಗಳು ಮುಗಿದಿವೆ. ಕೊಟ್ಟ ಮಾತಿನಂತೆ ಪೂರ್ಣ ಪ್ರಮಾಣದಲ್ಲಿ ಯಥಾವತ್ತಾಗಿ ಜಾರಿ ಮಾಡಿ ಎನ್ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮುಂದುವರಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು. ಈ ಬಗ್ಗೆ ಸಚಿವರು ಸಿಎಂ ಗಮನಕ್ಕೆ ತಂದು ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸರ್ದಾರ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಚನ್ನಬಸಪ್ಪ ವಕ್ಕಳದ್ ಮತ್ತು ಹನುಮಂತಪ್ಪ ಗಿಡ್ಡಿ, ಖಜಾಂಚಿ ರಾಮಣ್ಣ ಸಿನ್ನೂರು, ರಾಜ್ಯ ಪರಿಷತ್ ಸದಸ್ಯ ಶಿವಶಂಕರ್ ಕಲ್ಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್ ರ್ಯಾವಳದ್ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.