ಅಳ್ನಾವರ: ಭಾಗದ ಪ್ರಯಾಣಿಕರ ಬೇಡಿಕೆಯಂತೆ ಬೆಳಗಾವಿ-ಬೆಂಗಳೂರು ನಡುವೆ ನಿತ್ಯ ಸಂಚರಿಸುವ ರೈಲಿಗೆ ನಿಲುಗಡೆ ಮತ್ತು ಅಳ್ನಾವರ ನಿಲ್ದಾಣದಲ್ಲಿ ಈ ಹಿಂದೆ ಇದ್ದ ಪಾರ್ಸಲ್ ಸೇವೆ ಪುನರಾರಂಭಿಸುವ ಬಗ್ಗೆ ಪರಿಶೀಲಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಕೊಳ್ಳುವುದಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭರವಸೆ ನೀಡಿದ್ದಾರೆ.
ಕಟ್ಟಿಗೆ ಪೀಠೋಪಕರಣಗಳಿಗೆ ಹೆಸರಾಗಿರುವ ಅಳ್ನಾವರದಿಂದ ಸಿದ್ಧಗೊಂಡಿರುವ ಪೀಠೋಪಕರಣಗಳು ನಿತ್ಯ ದೇಶದ ವಿವಿಧೆಡೆ ಕಳುಹಿಸಲಾಗುತ್ತಿದ್ದು, ಹಿಂದೆ ಬ್ರಿಟಿಷ್ ಕಾಲದಿಂದಲೂ ಇದ್ದ ಪಾರ್ಸಲ್ ಸೇವೆಯನ್ನು ಈಗ ಸ್ಥಗಿತಗೊಳಿಸಿರುವ ಕಾರಣ ಉಂಟಾಗುತ್ತಿರುವ ತೊಂದರೆಯನ್ನು ಸಚಿವರ ಗಮನಕ್ಕೆ ತಂದಾಗ ಆದಷ್ಟು ಶೀಘ್ರ ಪಾರ್ಸಲ್ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದರ ಜತೆಗೆ ವಾಸ್ಕೋ, ಸಂಪರ್ಕ ಕ್ರಾಂತಿ, ಜೋಧಪುರ, ಅಜ್ಮೀರ, ಗಾಂಧಿಧಾಮ ರೈಲುಗಳಿಗೂ ಆದ್ಯತೆಯ ಮೇರೆಗೆ ನಿಲುಗಡೆ ನೀಡಲು ಮನವಿಯಲ್ಲಿ ಒತ್ತಾಯಿಸಲಾಗಿದೆ.ಪಪಂ ಮಾಜಿ ಅಧ್ಯಕ್ಷ ಅಮೋಲ ಗುಂಜೀಕರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ರೈಲು ನಿಲ್ದಾಣ ಸಲಹಾ ಸಮಿತಿ ಸದಸ್ಯ ಪ್ರವೀಣ ಪವಾರ, ಬಾಬು ಸುಣಗಾರ ಇನ್ನೀತರರು ಇದ್ದರು.