ಬ್ರಾಹ್ಮಣರಿಗೆ ಮೀಸಲಾತಿ ಜಾರಿಗೆ ಕಂಕಣ ಬದ್ಧ : ಜಾಧವ

KannadaprabhaNewsNetwork | Published : Apr 29, 2024 1:31 AM

ಸಾರಾಂಶ

ಮೀಸಲಾತಿ ಜಾರಿ ಬಗ್ಗೆ ವಿಪ್ರ ಸಮಾಜದ ಪ್ರಮುಖರ ಜೊತೆ ಚುನಾವಣೆ ಮುಗಿದ ಕೂಡಲೇ ಚರ್ಚಿಸಿ ಅದಕ್ಕೆ ಬೇಕಾದ ಕಾನೂನು ಕ್ರಮಗಳನ್ನು ಕ್ರೋಢೀಕರಿಸಿ ಬ್ರಾಹ್ಮಣ ಸಮಾಜಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಸಂಸದ ಉಮೇಶ್‌ ಜಾಧವ್‌

ಕನ್ನಡಪ್ರಭ ವಾರ್ತೆ ಕಲಬುರಗಿ

ಆರ್ಥಿಕವಾಗಿ ಹಿಂದುಳಿದ ಸಮಾಜಗಳಿಗೆ ಕೇಂದ್ರ ಸರಕಾರವು ಘೋಷಣೆ ಮಾಡಿದ ಮೀಸಲಾತಿಯಡಿ ಬ್ರಾಹ್ಮಣರು ಈ ಹಕ್ಕು ಪಡೆಯಲು ಕರ್ನಾಟಕದಲ್ಲಿ ವಂಚಿತವಾಗಿರುವುದಕ್ಕೆ ಕಾಂಗ್ರೆಸ್ ನೇರ ಹೊಣೆಯಾಗಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವಂತೆ ಕಂಕಣಬದ್ಧನಾಗಿ ಕೆಲಸ ಮಾಡುವೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಭರವಸೆ ನೀಡಿದ್ದಾರೆ.

ಕಲ್ಬುರ್ಗಿಯ ಸಂಗಮೇಶ್ವರ ಸಭಾಭವನದಲ್ಲಿ ಶನಿವಾರ ನಡೆದ ವಿಪ್ರ ಸಮಾಜದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರವು ದೇಶದಲ್ಲಿರುವ ಆರ್ಥಿಕ ಹಿಂದುಳಿದವರಿಗಾಗಿ ಜಾರಿ ಮಾಡಿದ ಮೀಸಲಾತಿಯಡಿ ಬ್ರಾಹ್ಮಣರು ಒಳಪಡುತ್ತಿದ್ದು ಬೊಮ್ಮಾಯಿ ಸರಕಾರವು ಈ ಮೀಸಲಾತಿಯನ್ನು ಜಾರಿ ಮಾಡಲು ಕ್ರಮಗಳನ್ನು ಕೈಗೊಳ್ಳುವಷ್ಟರಲ್ಲಿ ಸರಕಾರ ಬದಲಾವಣೆಗೊಂಡು ತಾಂತ್ರಿಕ ಅಡಚಣೆಗಳಿಂದಾಗಿ ನಿಲುಗಡೆಯಾಗಿತ್ತು. ಆದರೆ ಕಾಂಗ್ರೆಸ್ ಸರಕಾರವು ಬ್ರಾಹ್ಮಣರ ಬಗ್ಗೆ ಚುನಾವಣೆ ಬಂದಾಗ ಮಾತ್ರ ಸಭೆಗಳನ್ನು ನಡೆಸಿ ಓಟು ಗಿಟ್ಟಿಸಲು ಪ್ರಯತ್ನಿಸುತ್ತಿದ್ದು ಸಮುದಾಯಕ್ಕೆ ನೀಡಬೇಕಾದ ಮೀಸಲಾತಿಯ ಬಗ್ಗೆ ಚಕಾರವೆತ್ತುತ್ತಿಲ್ಲ.

ಮೀಸಲಾತಿ ಜಾರಿ ಬಗ್ಗೆ ವಿಪ್ರ ಸಮಾಜದ ಪ್ರಮುಖರ ಜೊತೆ ಚುನಾವಣೆ ಮುಗಿದ ಕೂಡಲೇ ಚರ್ಚಿಸಿ ಅದಕ್ಕೆ ಬೇಕಾದ ಕಾನೂನು ಕ್ರಮಗಳನ್ನು ಕ್ರೋಢೀಕರಿಸಿ ಬ್ರಾಹ್ಮಣ ಸಮಾಜಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೆ ಈ ಸಮಾಜಕ್ಕೆ ಕೂದಲು ಕೊಂಕು ಆಗದ ಹಾಗೆ ರಕ್ಷಣೆ ಮಾಡುವ ದೊಡ್ಡ ಜವಾಬ್ದಾರಿ ಲೋಕಸಭಾ ಸದಸ್ಯನಾಗಿ ನಾನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಬ್ರಾಹ್ಮಣರ ಕೊಡುಗೆ ಅಪಾರವಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕರ್ನಾಟಕದ ಪ್ರಹ್ಲಾದ ಜೋಶಿ ಅಂತವರ ಮಾರ್ಗದರ್ಶನವಿದೆ.

ಈ ಸಮುದಾಯದ ಅನಂತಕುಮಾರ್ ಹೆಗಡೆ, ತೇಜಸ್ವಿನಿ ಅನಂತ್ ಕುಮಾರ್ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನನ್ನ ತಂದೆಯವರಾದ ಗೋಪಾಲ್ ಜಾಧವ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ರಮಾನಂದ ತೀರ್ಥರು ವಿಜಯ ವಿದ್ಯಾಲಯದಲ್ಲಿ ಬಂಜಾರ ಸಮುದಾಯಕ್ಕಾಗಿ ನಿವೇಶನವನ್ನು ಕೊಟ್ಟು ಲಂಬಾಣಿಗರ ಹಿತಚಿಂತಕರಾಗಿದ್ದರು ಎಂದರು.

ಸನ್ನತಿಯ ಚಂದ್ರಲಾಂಬಾ ಕ್ಷೇತ್ರದ ಅಭಿವೃದ್ಧಿಗಾಗಿ ಬೊಮ್ಮಾಯಿ ಸರಕಾರ ನೀಡಿದ ವಿಶೇಷ ಅನುದಾನವನ್ನು ಕಾಂಗ್ರೆಸ್ ನವರು ರದ್ದು ಮಾಡಿದರು. ದೇಗುಲದಲ್ಲಿ ತಡೆಗೋಡೆ ನಿರ್ಮಾಣ ಬೊಮ್ಮಾಯಿ ಸರಕಾರದ ನೆರವಿನ ಕಾರ್ಯಕ್ರಮವಾಗಿದೆ . ಕಾಂಗ್ರೆಸ್ ಯಾವತ್ತೂ ಬ್ರಾಹ್ಮಣರ ವಿರೋಧಿಯಾಗಿದೆ. ಈ ಸಮುದಾಯದ ಹಿತಚಿಂತಕ ಪಕ್ಷವಾದ ಬಿಜೆಪಿ ಗೆ ಬ್ರಾಹ್ಮಣರ ಆಶೀರ್ವಾದವಿದೆ .ಮೇ ಏಳರಂದು ಅತ್ಯಧಿಕ ಮತಗಳಿಂದ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ನಾಗಿ ಮಾಡಲು ವಿಪ್ರ ಸಮಾಜ ಕೈಜೋಡಿಸಬೇಕು ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಅಧ್ಯಕ್ಷರಾದ ದತ್ತಾತ್ರೇಯ ಪೂಜಾರಿ ಬ್ರಾಹ್ಮಣ ಸಮುದಾಯದ ಹಿರಿಯರಾದ ಗಂಟಿ ರಾಮಾಚಾರ್ಯ, ಕೃಷ್ಣಾಜಿ ಕುಲಕರ್ಣಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಶಶಿಲ್ ಜಿ ನಮೋಶಿ ಮಾಜಿ ಶಾಸಕರಾದ ದತ್ತಾತ್ರೇ ಪಾಟೀಲ್ ರೇವೂರು ದಯಾಘನ ಧಾರವಾಡಕರ್ ಅವಿನಾಶ್ ಕುಲಕರ್ಣಿ ಜಗದೀಶ್ ಹುನಗುಂದ ಮುರಳಿಧರ ಭಟ್ ಪೂಜಾರಿ ಪ್ರಹ್ಲಾದ ಬುರ್ಲಿ ವಾದಿರಾಜ ವ್ಯಾಸಮುದ್ರ, ಪ್ರೀತಂ ಪಾಟೀಲ್, ಉಮೇಶ್ ಪಾಟೀಲ್, ವೆಂಕಟೇಶ್ ಪಾಟೀಲ್, ಗುರುರಾಜ ಭರತ್ ನೂರ್ ಮತ್ತಿತರರು ಉಪಸ್ಥಿತರಿದ್ದರು.

Share this article