ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಹಂಚಿಯಾಗುತ್ತಿಲ್ಲ

KannadaprabhaNewsNetwork | Published : Jan 5, 2025 1:35 AM

ಸಾರಾಂಶ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗೆ ಶನಿವಾರ ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗೆ ಶನಿವಾರ ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. 17ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಘೋಷಣೆ ಮಾಡಲಾಗಿತ್ತು. ಅನಿವಾರ್ಯ ಕಾರಣಗಳಿಂದ ಸ್ವಾಮೀಜಿ ಘಟಿಕೋತ್ಸವದಲ್ಲಿ ಭಾಗವಹಿಸಿರಲಿಲ್ಲ.

ಸಾಹಿತ್ಯ ಮತ್ತು ವಿವಿಧ ಲಲಿತ ಕಲೆಗಳಲ್ಲಿ ಅಭಿರುಚಿ ಹೊಂದಿರುವ ಇವರು, ವಿದ್ವತ್ ಪೂರ್ಣ ಬರಹಗಳನ್ನೊಳಗೊಂಡ ವಾಲ್ಮೀಕಿ ವಿಜಯ ಸ್ಮರಣ ಸಂಪುಟವೆಂಬ ಗ್ರಂಥ ರಚನೆಗೆ ತಮ್ಮ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ. ತಳ ಸಮುದಾಯಗಳ ಹಾಗೂ ನಾಯಕ ಜನಾಂಗದ ಇತಿಹಾಸ, ಸಾಹಿತ್ಯ, ಸಮಾಜ ಮತ್ತು ಧಾರ್ಮಿಕತೆಗಳ ಕುರಿತ ವಿದ್ವತ್ತನ್ನು ತಮ್ಮ ಆಧ್ಯಾತ್ಮಿಕ ವ್ಯಕ್ತಿತ್ವದ ಭಾಗವಾಗಿಸಿಕೊಂಡಿರುವ ಅಧ್ಯಯನಶೀಲರು. ಸ್ವಾಮೀಜಿಯವರ ನಿರಂತರ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಸಂಘ ಸಂಸ್ಥೆಗಳು ಶ್ರೀಗಳಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಈ ಸಾಧನೆಗಳನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿತು.

ನಂತರ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ಚುನಾವಣೆಯಲ್ಲಿ ತಳ ಸಮುದಾಯದ ಮತಗಳನ್ನು ಪಡೆಯುವ ಪಕ್ಷಗಳು, ಚುನಾವಣೆಯ ನಂತರ ಆ ಸಮುದಾಯಗಳಿಗೆ ನೀಡಿದ ಭರವಸೆ ಹಿತ ಮರೆಯುತ್ತವೆ. ರಾಜಕೀಯ ಇಚ್ಛಾಶಕ್ತಿ ಹಾಗೂ ಅಸಂಘಟನೆಯ ಕೊರತೆಯಿಂದಾಗಿ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಹಂಚಿಯಾಗುತ್ತಿಲ್ಲ. ನೀತಿಯಿಂದ ಮನುಷ್ಯನ ವ್ಯಕ್ತಿತ್ವವನ್ನು ಅಳೆದಾಗ ಸಮಸಮಾಜ ರೂಪುಗೊಳ್ಳಲಿದೆ ಎಂದರು.ತುಮಕೂರು ವಿವಿಯ ಅಕಾಡೆಮಿಕ್, ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್‌ ಸದಸ್ಯರು, ವಿವಿಧ ನಿಕಾಯಗಳ ಡೀನರು ಭಾಗವಹಿಸಿದ್ದರು. ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್‌ ಉಪಸ್ಥಿತರಿದ್ದರು.

ಸ್ವಾಮೀಜಿಯಿಂದ 400 ಕಿ.ಮೀ ಪಾದಯಾತ್ರೆ

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರುಗಳಿಸಿದ ಪ್ರಸನ್ನಾನಂದ ಸ್ವಾಮೀಜಿ ಗದಗ ಜಿಲ್ಲೆಯ ಹಿರೇಮಣ್ಣೂರಿನವರು. ಶಾಲಾ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಮನಸ್ಸು ಧಾರ್ಮಿಕತೆಯ ಕಡೆ ಸೆಳೆಯಲ್ಪಟ್ಟು ಸನ್ಯಾಸತ್ವದ ಮೂಲಕ ಪಾರಮಾರ್ಥಿಕ ಜೀವನ ಕೈಗೊಂಡರು. ಹಿಂದುಳಿದ ಸಮುದಾಯಗಳ ಏಳ್ಗೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹದಿನಾರು ದಿನಗಳ ಕಾಲ ರಾಜನಹಳ್ಳಿಯಿಂದ ರಾಜಧಾನಿಯವರೆಗೆ ಸುಮಾರು 400 ಕಿ.ಮಿ.ಗಳ ಬೃಹತ್ ಪಾದಯಾತ್ರೆಯನ್ನು ಕೈಗೊಂಡು ಕೆಳಸಮುದಾಯಗಳ ಅಳಲನ್ನು ಸರ್ಕಾರದ ಮುಂದೆ ಸಮರ್ಥವಾಗಿ ಮಂಡಿಸಿ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

Share this article