ಕನ್ನಡಪ್ರಭ ವಾರ್ತೆ ಕುಕನೂರು
ಬೆಳಗ್ಗೆ 10 ಗಂಟೆಯವರೆಗೆ ನೌಕರರನ್ನು ಬಿಟ್ಟು ನಿವಾಸಿಗಳು ಯಾರೊಬ್ಬರೂ ಮತದಾನ ಮಾಡಿರಲಿಲ್ಲ. ನಂತರ ಕೆಲವೇ ಕೆಲವರು ಮಾತ್ರ ಮತದಾನ ಮಾಡಿದ್ದಾರೆ.
ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದರು. ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ ಆಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಬಾಡಿಗೆ ರೂಪದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಗ್ರಾಮಸ್ಥರು ದೇವಸ್ಥಾನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಗುದ್ನೇಪ್ಪನಮಠ ದೇವಸ್ಥಾನದ ಜಾಗ ಕೈ ಬಿಡುವಂತೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ಒಂದು ಸಾವಿರದಷ್ಟು ಮತಗಳಿದ್ದು, ಕೇವಲ ಕೆಲವೇ ಜನರು ಮತದಾನ ಮಾಡಿ, ಉಳಿದವರು ಮತದಾನದಿಂದ ಹೊರಗುಳಿದಿದ್ದಾರೆ.ಗುಡ್ನೇಪ್ಪನಮಠದ ನಿವಾಸಿಗಳಾದ ಸಿದ್ಲಿಂಗಯ್ಯ ಬಂಡಿ, ರುದ್ರಯ್ಯ ಗಲಬಿ, ಮಲ್ಲಯ್ಯ ಹಲಸಿನಮರದ, ಶರಣಯ್ಯ ಹುಣಸಿಮರ, ಗುದ್ನೇಯ್ಯ ಬಂಡಿ, ವೀರಯ್ಯ ಬ್ಯಾಳಿ, ವಿರುಪಾಕ್ಷಯ್ಯ ಹುಣಸಿಮರ ಇತರರಿದ್ದರು.
ಮೂಲಭೂತ ಸೌಕರ್ಯ ಸೇರಿದಂತೆ ಮನೆಗಳ ಹಕ್ಕು ಪತ್ರ ನೀಡದ ಕಾರಣ ಮತದಾರರು ಮತದಾನ ಬಹಿಷ್ಕಾರ ಮಾಡಲು ನಿರ್ಧಾರ ಮಾಡಿದ್ದು, ಅಧಿಕಾರಿಗಳ ಭರವಸೆ ಬಳಿಕ ತಮ್ಮ ಹಕ್ಕು ಚಲಾಯಿಸಿದರು.ಈ ಹಿಂದೆ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರುವವರೆಗೂ ಮತದಾನ ಮಾಡಲ್ಲ ಎಂದು ಮನವಿ ಸಲ್ಲಿಸಿಸಿದ್ದರು. ಆಗ ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಬೇಡಿಕೆ ಈಡೇರದ ಕಾರಣ ಮತದಾನ ಬಹಿಷ್ಕಾರಕ್ಕೆ ಯತ್ನಿಸಿದ್ದರು.