ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲ್ವೇ ಮಾರ್ಗ ಮತ್ತು ಚಿಕ್ಕಜಾಜೂರು-ಬಳ್ಳಾರಿ ರೈಲ್ವೇ ಡಬ್ಲಿಂಗ್ ಯೋಜನೆಗೆ ಭೂಸ್ವಾಧೀನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈಲ್ವೇ ಅಭಿವೃದ್ಧಿಗೆ ಭೂಮಿ ನೀಡುವ ರೈತರಿಗೆ ನಿಯಮಾನುಸಾರ ಪರಿಹಾರ ನೀಡುವುದರ ಮೂಲಕ ಅವರ ಹಿತ ಕಾಪಾಡುವಂತೆ ಸೂಚಿಸಿದರು.
ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು. ತಡವಾದಷ್ಟು ಯೋಜನೆಗಳ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ರೈತರು ರೈಲ್ವೇ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ, ಆದರೆ ಸೂಕ್ತ ಬೆಲೆ ಅಪೇಕ್ಷಿಸುತ್ತಿದ್ದಾರೆ. ಹೊಳಲ್ಕೆರೆ ಭಾಗ ಅರೆ ಮಲೆನಾಡು ಪ್ರದೇಶವಾಗಿದ್ದು, ರೈತರು ಜಮೀನುಗಳಲ್ಲಿ ಅಡಕೆ, ಮಾವಿನ ತೋಟಗಳನ್ನು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬೆಳೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ತಮ್ಮ ವರದಿ ನೀಡಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ಆತಂಕ ಬೇಡ, ಸಬ್ ರಿಜಿಸ್ಟ್ರಾರ್ ಕಚೇರಿಯ ಮಾರುಕಟ್ಟೆ ಮೌಲ್ಯದ ದರ ಆಧರಿಸಿ ಮೂಲ ಬೆಲೆ ನಿಗದಿಪಡಿಸಲಾಗುತ್ತದೆ. ಇದರ ಆಧಾರ ಮೇಲೆ ಭೂಮಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ಇದರೊಂದಿಗೆ ಜಮೀನಿನಲ್ಲಿ ಇರುವ ಬೆಳೆ, ತೋಟಗಾರಿಕೆ ಬೆಳೆಗಳು, ಪಶು ಸಂಗೋಪನೆಗಾಗಿ ನಿರ್ಮಿಸಿರುವ ಕಟ್ಟಡ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ನಿರ್ಮಿಸಿದ ಇತರೆ ನಿರ್ಮಾಣಗಳಿಗೂ ಪರಿಹಾರ ದೊರಕಲಿದೆ. ನಿಯಮಗಳ ಅಡಿ ರೈತರಿಗೆ ದೊರಕಬೇಕಾಗದ ಗರಿಷ್ಠ ಮಟ್ಟದ ಪರಿಹಾರಗಳನ್ನು ದೊರಕಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಉಪಕೇಂದ್ರ ಹಾಗೂ ಜಾಲಗಳ ನಿರ್ಮಾಣಕ್ಕೆ ಒಟ್ಟು 194 ಎಕರೆ ಭೂ ಅವಶ್ಯಕತೆ ಇದ್ದು, ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪೈಕಿ ಚಿತ್ರದುರ್ಗ ಹಾಗೂ ಭರಮಸಾಗರ ಮಧ್ಯ 56 ಎಕರೆ ಭೂ ಸ್ವಾಧೀನಕ್ಕೆ ಜಂಟಿ ಅಳತೆ ಸಮೀಕ್ಷೆ (ಜೆಎಂಸಿ) ಯನ್ನು ಸಹ ಪೂರ್ಣಗೊಳಿಸಲಾಗಿದೆ. ಪಾಲವ್ವನಹಳ್ಳಿ-ಚಿತ್ರದುರ್ಗದ ಮದ್ಯ 28-25 ಎಕರೆ ಭೂಮಿ ಅವಶ್ಯಕತೆ ಇದೆ. ನಕ್ಷೆ ಹಾಗೂ ಭೂ ದಾಖಲೆಗಳ ತಯಾರಿಕೆ 15 ದಿನಗಳ ಅವಶ್ಯಕತೆಯಿದೆ. ಹಿರಿಯೂರು ತವರಕೆರೆ ಮಧ್ಯೆ 31 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 60 ದಿನ ನೋಟಿಸ್ ಅವಧಿ ಪೂರ್ಣಗೊಂಡ ನಂತರ ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು. ಇದೇ ಮಾದರಿಯಲ್ಲಿ ಚಿತ್ರದುರ್ಗ ಹಿರಿಯೂರು ಮಧ್ಯೆ 79 ಎಕೆರೆ ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಸ್.ಜೆ.ಕಾಂತರಾಜು, ಜಿಪಂ ಸಿಪಿಓ ಗಾಯತ್ರಿ, ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ರೈಲ್ವೇ ಎಂಜಿನಿಯರ್ಗಳಾದ ಮುನಿಕೃಷ್ಣ, ಹರೀಶ್, ರಜತ್ ಇದ್ದರು.