- ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಂತಿ ಸಭೆ
ಗಣೇಶಮೂರ್ತಿಯನ್ನು ಸಂರಕ್ಷಣೆ ಮಾಡಿಕೊಳ್ಳುವುದು ಪ್ರತಿಷ್ಠಾಪಿಸುವ ಸಮಿತಿಗಳ ಜವಾಬ್ದಾರಿ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಿರಂಜನ್ ಗೌಡ ಹೇಳಿದರು.ತಾಪಂ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಗಣೇಶ ಚತುರ್ಥಿ- ಈದ್ ಮಿಲಾದ್ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮಾಹಿತಿ ನೀಡಿ, ಗಣಪತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಮೆಸ್ಕಾಂ ಇಲಾಖೆ ಅನುಮತಿ ಪಡೆಯಬೇಕು. ತರಬೇತಿ ಹೊಂದಿದ ಎಲೆಕ್ಟ್ರೀಷನ್ ಹೊಂದಿರಬೇಕು. ಬೆಂಕಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೆರವಣಿಗೆಯಲ್ಲಿ ಟ್ಯಾಬ್ಲೊ ಬಳಸುವಾಗ ಎತ್ತರ, ಅಗಲದ ಬಗ್ಗೆ ಮಾಹಿತಿ ನೀಡಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಕಿರಿ ದಾಗಿದ್ದು, ವಿದ್ಯುತ್ ಮಾರ್ಗಗಳು ಹಾದು ಹೋಗಿರುವುದರಿಂದ ಎಚ್ಚರಿಕೆ ವಹಿಸಲು ಆದೇಶಿಸಿದರು.
ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ಸೂಕ್ಷ್ಮ ಪ್ರದೇಶಗಳು, ಅನ್ಯಧರ್ಮೀಯರ ಪ್ರಾರ್ಥನಾ ಮಂದಿರಗಳ ಬಳಿ ಪಟಾಕಿ ಹೊಡೆದು ನೃತ್ಯ ಮಾಡುವಂತಿಲ್ಲ. ಸರ್ಕಾರದ ಆದೇಶದಂತೆ ಯಾವುದೇ ಕಾರಣಕ್ಕೂ ಡಿಜೆ ಬಳಸುವಂತಿಲ್ಲ. ಬಂಟಿಂಗ್, ಬಾವುಟ ಕಟ್ಟುವಾಗ ಪೊಲೀಸರ ಅನುಮತಿ ಕಡ್ಡಾಯ. ಬ್ಯಾನರ್ ಗಳಲ್ಲಿ ಯಾವುದೇ ಜಾತಿ, ಧರ್ಮ, ಪಂಥ ವಿರೋಧಿಸುವ ಬರವಣಿಗೆ ಸಲ್ಲದು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಹಾಕುವಂತಿಲ್ಲ ಎಂದು ಸೂಚಿಸಿದರು.ಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ, ಸಿಸಿ ಕ್ಯಾಮೆರಾಗಳು ಬಾಡಿಗೆಗೆ ಸಿಗುವುದರಿಂದ ಹೆಚ್ಚಿನ ವೆಚ್ಚ ತಗಲುವುದಿಲ್ಲ. ವಿಸರ್ಜನಾ ಮೆರವಣಿಗೆ ಹಾದು ಹೋಗುವ ಮಾರ್ಗದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ವಿಸರ್ಜನೆಗೆ ಈಜು ಬರುವವನ್ನೆ ಇಳಿಸಬೇಕು. ಮಳೆಯಿಂದ ಕೆರೆ ಕಟ್ಟೆಗಳು ತುಂಬಿದ್ದು ಮುಂಜಾಗೃತ ಕ್ರಮವಾಗಿ ಸ್ಥಳೀಯ ಆಡಳಿತ ಗಣಪತಿ ವಿಸರ್ಜನೆ ಸ್ಥಳದ ಆಳ, ಅಗಲದ ಮಾಹಿತಿ ನೀಡಬೇಕು. ರಾತ್ರಿ 11ರೊಳಗೆ ಗಣಪತಿ ವಿಸರ್ಜಿಸಿ. ಈ ನಾ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್ ಮಾತನಾಡಿ, ಮೆರವಣಿಗೆ ಹಾದು ಹೋಗುವ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿದ್ದರೆ ಜಲ್ಲಿಕಲ್ಲುಗಳು ಮತ್ತಿತರ ಪರಿಕರಗಳಿದ್ದರೆ ಅವುಗಳನ್ನು ತೆರವುಗೊಳಿಸ ಬೇಕು. ಸಾಮೂಹಿಕ ಅನ್ನಸಂತರ್ಪಣೆ ಇದ್ದಾಗ ಮೊದಲು ಸಮಿತಿಯಿಂದ ಆಹಾರ ಪರೀಕ್ಷಿಸಿ ನಂತರ ಇತರರಿಗೆ ವಿತರಿಸ ಬೇಕು ಎಂದರು. ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಇದ್ದರು.