ಬೆಳ್ತಂಗಡಿ: 17ರಂದು ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Dec 16, 2023, 02:00 AM IST
ಕಸಾಪ | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಾಳೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗೋಷ್ಠಿಗಳು ನಡೆಯಲಿದ್ದು, ಸಾಧಕರಿಗೆ ಸನ್ಮಾನ ನಡೆಯಲಿದೆ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನ 17ರಂದು ಬೆಳ್ತಂಗಡಿಯ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಿವೃತ್ತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಸರ್ವಾಧ್ಯಕ್ಷತೆಯಲ್ಲಿ ಜರಗಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಸುವರ್ಣ ಕರ್ನಾಟಕ ವರ್ಷವಾದ್ದರಿಂದ ‘ಸುವರ್ಣ ಕರ್ನಾಟಕ ಭಾಷೆ ಸಾಹಿತ್ಯ ಸಂಸ್ಕೃತಿ’ ಆಶಯದ ಹಿನ್ನೆಲೆಯಲ್ಲಿ ಸಮ್ಮೇಳನದ ರೂಪುರೇಷೆ ತಯಾರಿಸಲಾಗಿದೆ ಎಂದರು

ಕಲ್ಪತರು ಆವರಣದಿಂದ ಸಮ್ಮೇಳನದ ಚಪ್ಪರದವರೆಗೆ ಗಣ್ಯರನ್ನು ಮೆರವಣಿಗೆಯಲ್ಲಿ ಬರಮಾಡಿಕೊಂಡು ನಂತರ 9.30ಕ್ಕೆ ಶಾಸಕ ಹರೀಶ್ ಕುಮಾರ್ ರಾಷ್ಟ್ರ ಧ್ವಜ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜ ಮತ್ತು ತಾಲೂಕು ಅಧ್ಯಕ್ಷ ಡಿ ಯದುಪತಿ ಗೌಡ ಕನ್ನಡ ಧ್ವಜ ಆರೋಹಣ ಮಾಡುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಚಿಕ್ಕಮಗಳೂರಿನ ಸಾಹಿತಿ, ಬರಹಗಾರ, ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ಸಮ್ಮೇಳನ ಉದ್ಘಾಟಿಸಲಿದ್ದು, ಶಾಸಕ ಹರೀಶ್ ಪೂಂಜ ಸಮ್ಮೇಳನದ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಅತಿಥಿಗಳಾಗಿ ಶ್ರೀ.ಧ.ಮ. ಶಿಕ್ಷಣ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ, ಸಮಾಜಸೇವಕ, ಉದ್ಯಮಿ ಹಲೇಜಿಯ ಕಿರಣ್ ಕುಮಾರ್ ಪುಷ್ಪಗಿರಿ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಗಳು: ಜ್ಞಾನಪೀಠ ಪುರಸ್ಕೃತರಾಗಿರುವ ಎಂಟು ಮಂದಿ ಸಾಹಿತ್ಯ ಲೋಕದ ದಿಗ್ಗಜರ ನೆನಪು, ‘ಸುವರ್ಣ ಕರ್ನಾಟಕ: ಭಾಷೆ, ಸಾಹಿತ್ಯ ಸಂಸ್ಕೃತಿ’ಸಂವಾದ ಗೋಷ್ಠಿ ನಡೆಯಲಿದೆ. ಅಪರಾಹ್ನ ಬೆಳ್ತಂಗಡಿ ತಾಲೂಕಿನ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಯುವ ಕವಿಗೋಷ್ಠಿ ನಡೆಯಲಿದೆ. ಬಳಿಕ ನಾಡಿನ ಸಮೃದ್ಧಿಗಾಗಿ ಸೇವೆ ಸಲ್ಲಿಸಿದ ಹಿರಿಯರಾದ ಡಾ. ಕೆ.ಎಂ. ಶೆಟ್ಟಿ ಬಳ್ಳಮಂಜ(ಸಾಹಿತ್ಯ), ಗೋಪಾಲಕೃಷ್ಣ ಭಟ್ ಕಾಂಚೋಡು(ದೇಶ ಸೇವೆ), ಬೇಬಿ ಪೂಜಾರಿ ಪಿಲ್ಯ (ನಾಟಿ ವೈದ್ಯರು), ಡಾ.ಎನ್ .ಎಂ. ಜೋಸೆಫ್(ಶಿಕ್ಷಣ) ಮತ್ತು ಹೈದರಾಲಿ ಹಳ್ಳಿಮನೆ ಕೊಯ್ಯರು (ಜಾನಪದ ವಸ್ತು ಸಂಗ್ರಾಹಕರು) ಇವರಿಗೆ ಸನ್ಮಾನ ಮತ್ತು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಂ ಪಿ ಶ್ರೀನಾಥ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ.

ಸಮಾರೋಪ ಭಾಷಣಕಾರರಾಗಿ ಸುಳ್ಯದ ಡಾ. ಪೂವಪ್ಪ ಕಣಿಯೂರು ಅವರನ್ನು ಆಹ್ವಾನಿಸಲಾಗಿದ್ದು, ಅತಿಥಿಗಳಾಗಿ ಶಾಸಕ ಪ್ರತಾಪಸಿಂಹ ನಾಯಕ್, ಶರತ್ ಕೃಷ್ಣ ಪಡುವೆಟ್ನಾಯ ಉಜಿರೆ, ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಎಚ್ ಪದ್ಮ ಗೌಡ, ಸಾಹಿತ್ಯ ಸಂಸ್ಕೃತಿ ಪೋಷಕ ಶ್ರೀಶ ಮುಚ್ಚಿನ್ನಾಯರವರು ಪಾಲ್ಗೊಳ್ಳಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಸಮ್ಮೇಳನದ ವಿಶೇಷತೆ:

ತಾಲೂಕಿನ ಸಾಹಿತ್ಯ ಸಂಸ್ಕೃತಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಹಳಷ್ಟು ಕೊಡುಗೆ ನೀಡಿದ ರಮಾನಂದ ಸಾಲಿಯಾನ್ ಬೆಳ್ತಂಗಡಿ ಹೆಸರಿನ ವೇದಿಕೆಯಲ್ಲಿ ಸಮ್ಮೇಳನದ ಕಾರ್ಯಕಲಾಪ ಜರಗಲಿದ್ದು ಅವರ ಸಂಸ್ಮರಣೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತೀ ಗೋಷ್ಠಿ, ಭಾಷಣದ ತರುವಾಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ಮತ್ತು ನೃತ್ಯ ನಡೆಯಲಿದೆ. ಮಧ್ಯಾಹ್ನದ ಅವಧಿಯಲ್ಲಿ ಯುವ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನಾಮೃತ ನಡೆಯಲಿದೆ.

ಸಂಪನ್ಮೂಲ ಅತಿಥಿಗಳು:

ಶಿವ ಪ್ರಸಾದ್ ಸುರ್ಯ, ಕಲಾಕುಂಚದ ಮೆಹಕ್ ಪ್ರಸನ್ನ ಕಾಲೇಜು, ಡಾ. ಶ್ರೀಧರ ಭಟ್ ಉಜಿರೆ, ಡಾ. ಸುಬ್ರಹ್ಮಣ್ಯ ಭಟ್ ಮೇಲಂತಬೆಟ್ಟು, ಮಧೂರು ಮೋಹನ ಕಲ್ಲೂರಾಯ, ಚಂದ್ರಶೇಖರ ಗೌಡ, ವಸಂತಿ ಟಿ. ನಿಡ್ಲೆ.

ಅಂದಾಜು ಒಂದೂವರೆ ಸಾವಿರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ವ್ಯವಸ್ಥೆಗಳು ಭರದಿಂದ ಸಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರತಿನಿಧಿಗಳನ್ನಾಗಿ ಆಹ್ವಾನಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ಕಾರ್ಯದರ್ಶಿ ವಿಷ್ಣು ಪ್ರಕಾಶ ಬೆಳ್ತಂಗಡಿ, ಕೋಶಾಧ್ಯಕ್ಷೆ ಮೀನಾಕ್ಷಿ ಎನ್.ಸನ್ಮಾನ ಸಮಿತಿ ಸಂಚಾಲಕ ಬಿ. ಲಕ್ಷ್ಮಣ ಪೂಜಾರಿ ಬೆಳ್ತಂಗಡಿ,ಲಕ್ಷ್ಮೀನಾರಾಯಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌