ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ (ಶ್ರೇಷ್ಠ ಗುರು) ಆಗಿ ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರನ್ನು ನೇಮಕಗೊಳಿಸಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಆದೇಶ ಹೊರಡಿಸಿದ್ದಾರೆ. ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರು ಪ್ರಸ್ತುತ ಕಳತ್ತೂರು ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ 39 ವರ್ಷಗಳ ಸಮರ್ಪಿತ ಯಾಜಕ ಸೇವೆಯಲ್ಲಿ, ಫ್ರಾನ್ಸಿಸ್ ಅವರು ಧರ್ಮಪ್ರಾಂತ್ಯದ ವಿವಿಧ ಧಾರ್ಮಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. 1987 - 1997ರವರೆಗೆ ಮಿಷನರಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿ, ಬೀದರ್, ಭಾಲ್ಕಿ, ಜಲಸಂಗಿ, ಹುಮನಾಬಾದ್ ಹಾಗೂ ಬಸವ ಕಲ್ಯಾಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. 1997- 2004ರವರೆಗೆ ಮಂಗಳೂರು ಬಜಾಲಿನ ಹೋಲಿ ಸ್ಪಿರಿಟ್ ಚರ್ಚಿನಲ್ಲಿ ಧರ್ಮಗುರುಗಳಾಗಿ, 2004-2006ರವರೆಗೆ ಕೆನರಾ ಕಮ್ಯುನಿಕೇಶನ್ ಸೆಂಟರ್ ಹಾಗೂ ವೊಕೇಶನ್ ಸರ್ವಿಸ್ ಸೆಂಟರ್ ನಿರ್ದೇಶಕ, 2006-2008ರವರೆಗೆ ಸಂದೇಶ – ಕರ್ನಾಟಕ ಪ್ರಾದೇಶಿಕ ಸಂವಹನ ಕೇಂದ್ರದ ನಿರ್ದೇಶಕ ಹಾಗೂ 2004-2008ರವರೆಗೆ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. 2008-2016ರವರೆಗೆ ಮಣಿಪಾಲದ ಕ್ರೈಸ್ಟ್ ಚರ್ಚ್, 2016 - 2022ರವರೆಗೆ ಮುದರಂಗಡಿ ಸೇಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್, 2022 - 2026ರವರೆಗೆ ಕಲತ್ತೂರು ಅವರ್ ಲೇಡಿ ಆಫ್ ಪರ್ಪೆಚುವಲ್ ಸೆಕ್ಯೂರ್ ಚರ್ಚಿನಲ್ಲಿ ಸೇವೆ ಸಲ್ಲಿಸಿದ್ದರು. ಅವರನ್ನು ಮೇ 18ರಿಂದ ಕಲ್ಯಾಣಪುರದ ಮಿಲಾಗ್ರಿಸ್ ಪ್ರಧಾನಾಲಯದ ರೆಕ್ಟರ್ ಹಾಗೂ ಧರ್ಮಗುರುಗಳಾಗಿ ಅದರೊಂದಿಗೆ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಕೂಡ ನೇಮಕ ಮಾಡಲಾಗಿದೆ.