ದೊಡ್ಡಬಳ್ಳಾಪುರ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬಲಗೈ ಜಾತಿ ಸಮುದಾಯಗಳು ಹೊಲೆಯ ಎಂದು ಬರೆಸಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸೊಣ್ಣಪ್ಪನಹಳ್ಳಿ ರಮೇಶ್ ಮನವಿ ಮಾಡಿದರು.ನಗರದ ಟಿ.ಬಿ.ನಾರಾಯಣಪ್ಪ ಬಡಾವಣೆ ಬಳಿ ಮಹಾಸಭಾ ಸಂಘದ ತಾಲೂಕು ಘಟಕದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ನಾಗಮೋಹನ್ ದಾಸ್ ಅವರು ನಡೆಸಿದ ಸಮೀಕ್ಷೆಯಲ್ಲಿ ಹಲವು ಗೊಂದಲಗಳಿದ್ದ ಕಾರಣಕ್ಕೆ ಸಮೀಕ್ಷೆಯಲ್ಲಿ ನಮ್ಮ ಸಮುದಾಯದ ಸ್ಪಷ್ಟ ಅಂಕಿ ಸಂಖ್ಯೆ ಸಿಕ್ಕಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ಹಿಂದುಳಿದ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲಾ ಬಲಗೈ ಜಾತಿ ಸಂಬಂಧಿಸಿದ ಬಂಧುಗಳು ಹೊಲೆಯ ಎಂದು, ಬೌದ್ಧ ಧರ್ಮ ಪಾಲಿಸುವವರು ಬೌದ್ಧ ಧರ್ಮ ಎಂದು ತಪ್ಪದೇ ನಮೂದಿಸಬೇಕು. ಸರ್ಕಾರ ಸಮೀಕ್ಷೆಯ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಸೌಲಭ್ಯವನ್ನು ನೀಡುತ್ತದೆ. ಆದ್ದರಿಂದ ನಮ್ಮ ಮೂಲ ಜಾತಿ ಹಾಗೂ ಉಪ ಜಾತಿಯನ್ನು ನಮೂದಿಸಿದರೆ, ನಮ್ಮ ನಿಜವಾದ ಜನಸಂಖ್ಯೆಯ ಅನುಗುಣವಾಗಿ ಒಳ ಮೀಸಲಾತಿ ಸೌಲಭ್ಯ ದೊರೆಯಲಿದೆ. ಇಲ್ಲದಿದ್ದರೆ ನಮ್ಮ ಸಮುದಾಯಕ್ಕೆ ನಷ್ಟವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ರಾಜು ಸಣ್ಣಕ್ಕಿ, ಖಜಾಂಚಿ ಕನ್ನಮಂಗಲ ರಮೇಶ್, ಸಹ ಕಾರ್ಯದರ್ಶಿ ಕೆಸ್ತೂರು ಮುನಿರಾಜು ಕಾರ್ಯದರ್ಶಿ ಜಗದೀಶ್, ತಿಮ್ಮರಾಜು, ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ಮಹಾಸಭಾದ ಮಾಜಿ ಅಧ್ಯಕ್ಷ ಬಾಲಕೃಷ್ಣ, ಕೊನಘಟ್ಟ ವಿಎಸ್ಎಸ್ಎನ್ ಉಪಾಧ್ಯಕ್ಷ ರಮೇಶ್, ಹಿರಿಯ ಮುಖಂಡರಾದ ಮರಿಯಪ್ಪ, ಮಲ್ಲರಾಜು, ಮುನಿಕೃಷ್ಣ, ಗೂಳ್ಯ ಹನುಮಣ್ಣ, ಶಿವಶಂಕರ್, ರವಿ, ತಳಗವಾರ ಪುನೀತ್ ಮುಂತಾದವರು ಉಪಸ್ಥಿತರಿದ್ದರು.
7ಕೆಡಿಬಿಪಿ7-ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ದೊಡ್ಡಬಳ್ಳಾಪುರ ತಾಲೂಕು ಘಟಕದ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.