ದೊಡ್ಡಬಳ್ಳಾಪುರ: ಮಹರ್ಷಿ ವಾಲ್ಮೀಕಿ ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ರಾಮಾಯಣ ಮಹಾಕಾವ್ಯ ಒಂದು ಭಾವಪ್ರಧಾನ ಕೃತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು ತಿಳಿಸಿದರು.ಇಲ್ಲಿನ ತಾಲೂಕು ಕಸಾಪ ನೇತೃತ್ವದಲ್ಲಿ ಮಂಗಳವಾರ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಮಹರ್ಷಿ ವಾಲ್ಮೀಕಿಯನ್ನು ರಾಮನಿಗೆ ಸಮಕಾಲೀನರೆಂದು ಪರಿಗಣಿಸಲಾಗಿದೆ. ರಾಮನಿಂದ ಸೀತೆಯು ಬಹಿಷ್ಕೃತಗೊಂಡಾಗ ಸೀತೆಗೆ ಆಶ್ರಯ ನೀಡುವವರು ಮಹರ್ಷಿ ವಾಲ್ಮೀಕಿ ಆಗಿದ್ದಾರೆ. ಶತಶತಮಾನಗಳಿಂದ ಭಾರತೀಯರ ಮನ್ನಣೆಗೆ ಪಾತ್ರವಾಗಿರುವ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ವಾಲ್ಮೀಕಿಯ ವಿದ್ವತ್ತಿಗೆ ಜನಮನ್ನಣೆ ದೊರೆತಿದೆ ಎಂದರು.
ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ವಾಲ್ಮೀಕಿಯ ಸೃಜನಶೀಲತೆ ಮತ್ತು ಕಲಾತ್ಮಕತೆಯ ಪ್ರಭಾವದಿಂದಾಗಿ ಹಲವು ಭಾರತೀಯ ಭಾಷೆಗಳಲ್ಲಿ ರಾಮಾಯಣ ಕೃತಿಗಳು ರಚನೆಗೊಂಡಿವೆ ಎಂದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಜಿಲ್ಲಾ ಅಧ್ಯಕ್ಷ ಮುನಿಪಾಪಣ್ಣ, ತಾಲೂಕು ಅಧ್ಯಕ್ಷ ವೆಂಕಟೇಶ್, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ , ದೊಡ್ಡಬೆಳವಂಗಲ ಘಟಕದ ಕಾರ್ಯದರ್ಶಿ ಅಂಜನಮೂರ್ತಿ, ಪ್ರತಿನಿಧಿಗಳಾದ ನಾಗರತ್ನಮ್ಮ, ರಾಧಮಣಿ, ಸಫೀರ್, ರಂಗಸ್ವಾಮಯ್ಯ, ಪುಟ್ಟಸಿದ್ದಯ್ಯ, ಗೆಜ್ಜಗದಹಳ್ಳಿ ಮುನಿರಾಜು, ಎಂ.ಸಿ.ಮಂಜುನಾಥ್, ಜಿ.ಎಸ್.ಚೌಧರಿ, ಕೆ.ಆರ್.ಜಯರಾಮ್ ಮತ್ತಿತರರು ಭಾಗವಹಿಸಿದ್ದರು.
7ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಿತು.