ಸಂಡೂರು: ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಸಮಿತಿಯಿಂದ ಬುಧವಾರ ಪಟ್ಟಣದಲ್ಲಿ ಹಕ್ಕೊತ್ತಾಯ ಮಾಡಲಾಯಿತು.
ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಎಚ್.ದುರುಗಮ್ಮ, ಮಹಿಳೆಯರನ್ನು ದೌರ್ಜನ್ಯದ ದೇವದಾಸಿ ಪದ್ಧತಿಯಲ್ಲಿಯೇ ಉಳಿಯುವಂತೆ ಮಾಡುವ ಅಸಮರ್ಪಕ ಸರ್ವೇ ಸರಿಪಡಿಸಬೇಕು. ಈಗಾಗಲೇ ಗಣತಿಯಲ್ಲಿ ಇರತಕ್ಕಂತಹ ಮಹಿಳೆರನ್ನು ಗಣತಿ ಮಾಡುವುದಕ್ಕಿಂತ ಮೊದಲು, ಯಾರು ಗಣತಿಯ ಹೊರಗೆ ಇದ್ದಾರೆಯೋ ಅವರನ್ನು ಗಣತಿ ಮಾಡಬೇಕು. ನಿಂತಿರುವ ಪೆನ್ಶನ್ ಕೂಡಲೇ ಬಿಡುಗಡೆ ಮಾಡಬೇಕು. ೨೦೦೭ರಲ್ಲಿ ಸರ್ಕಾರವೇ ಸರ್ವೇ ಮಾಡಿದ ದೇವದಾಸಿ ಮಹಿಳೆಯರನ್ನು ವಯೋಮಿತಿ ಹೇರಿ ಸರ್ವೆಯಿಂದ ಹೊರಗೆ ಇಟ್ಟಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ನಮೂನೆ ೧, ೨, ೩ ಸಮರ್ಪಕವಾಗಿ ಸರ್ವೆ ಮಾಡಿಲ್ಲ. ನಮೂನೆ ೨ರಲ್ಲಿ ಅರ್ಜಿ ಹಾಕಿದ ದೇವದಾಸಿ ಮಹಿಳೆಯರಿಗೆ ವಯೋಮಿತಿ ಇಲ್ಲದೇ ಸಮರ್ಪಕವಾಗಿ ಸರ್ವೆ ಮಾಡಬೇಕು. ಸರ್ವೆ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು. ಎಲ್ಲ ದೇವದಾಸಿ ಮಹಿಳೆಯರಿಗೆ ಸಾಲ ಸೌಲಭ್ಯ ಹಾಗೂ ಸಹಾಯಧನ ₹೨ ಲಕ್ಷ ನೀಡಬೇಕು. ಎಲ್ಲ ದೇವದಾಸಿ ಮಕ್ಕಳಿಗೆ ವಿದ್ಯಾಭ್ಯಾಸ ಅನುಸಾರ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ಹತ್ತು ಸಾವಿರ ನೀಡಬೇಕು ಎಂದರು.ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿದ ರೀತಿಯಲ್ಲಿ ಸರ್ಕಾರ ಭೂಸ್ವಾಧೀನ ಮಾಡಿ, ಹೆಚ್ಚು ಜಮೀನು ಹೊಂದಿರುವ ಮಾಲೀಕರಿಂದ ಭೂಮಿಯನ್ನು ವಶಪಡಿಸಿಕೊಂಡು ದೇವದಾಸಿ ಮಹಿಳೆಯರಿಗೆ ಐದು ಎಕರೆ ಭೂಮಿ ನೀಡಬೇಕು. ಮುಂತಾದವು ನಮ್ಮ ಪ್ರಮುಖ ಹಕ್ಕೊತ್ತಾಯಗಳಾಗಿದ್ದು, ಅವುಗಳನ್ನು ಈಡೇರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಡೂರಿನಲ್ಲಿ ಬುಧವಾರ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸದಸ್ಯರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ ಅವರಿಗೆ ಸಲ್ಲಿಸಿದರು.