ಶೋಷಿತ ಸಮುದಾಯಕ್ಕೆ ಹಕ್ಕು-ಅಂಬೇಡ್ಕರ್ ಹೋರಾಟದ ಫಲ: ಮುಂಡರಗಿ ನಾಗರಾಜ್

KannadaprabhaNewsNetwork | Published : Apr 28, 2025 11:45 PM

ಸಾರಾಂಶ

ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ 134ನೇ ಹಾಗೂ ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಗ್ರಾಮದ ನಾಗನಾಥೇಶ್ವರ ದೇವಸ್ಥಾನದ ಮುಂಭಾಗದ ಹಮ್ಮಿಕೊಳ್ಳಲಾಗಿತ್ತು.

ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ 134ನೇ ಹಾಗೂ ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಗ್ರಾಮದ ನಾಗನಾಥೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿದ ವೆಂಕಟಾಪುರದ ಬಸವರಾಜಪ್ಪ ಶರಣರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಹಾಗೂ ಸಂವಿಧಾನ ರಚನೆಯ ಪಾತ್ರದಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳ ಕುರಿತು ತಿಳಿಸಿದರು.

ಚರ್ಮಗಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಹಾಗೂ ಹಿರಿಯ ಮುಖಂಡ ಬಿ.ಎಂ. ಸತೀಶ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್‌ ಅವರಿಂದ ಸಮಾಜದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದೇವೆ. ಅಂಬೇಡ್ಕರ್ ಅವರ ಹೋರಾಟದ ಫಲದಿಂದಾಗಿಯೇ ಇಂದು ಶೋಷಿತ ಸಮುದಾಯಗಳು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.ಶಿಕ್ಷಣ ಹಾಗೂ ಹೋರಾಟಕ್ಕೆ ಅಂಬೇಡ್ಕರ್ ಅವರು ಆದ್ಯತೆ ನೀಡಿದ್ದರು. ಶಿಕ್ಷಣಕ್ಕಿಂದ ದೊಡ್ಡ ಅಸ್ತ್ರ ಮತ್ತೊಂದಿಲ್ಲ ಎಂದು ನಂಬಿದ್ದರು. ಹೀಗಾಗಿಯೇ ಅವರು ಸತತ ಅಧ್ಯಯನದ ಮೂಲಕ ಸಂವಿಧಾನ ಶಿಲ್ಪಿ ಎನಿಸಿಕೊಂಡರು ಎಂದು ಹೇಳಿದರು.

ಶ್ರೀ ಬಸವಭೂಷಣಸ್ವಾಮಿ ಹಾಗೂ ದರಪ್ಪ ನಾಯಕ ಮಾತನಾಡಿದರು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಅಪ್ಪು ಕಲಾ ಟ್ರಸ್ಟ್, ಜೈ ಭೀಮ್‌ನ ಸ್ನೇಹ ಜೀವಿ ಹಾಗೂ ಬಳ್ಳಾರಿ ಈರೇಶ್ ತಂಡದಿಂದ ಭಾರತ ಭಾಗ್ಯವಿಧಾತ ನೃತ್ಯರೂಪಕ ಪ್ರದರ್ಶನಗೊಂಡಿತು. ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಕುರುಗೋಡು ತಾಲೂಕು ಪುರಸಭೆಯ ಅಧ್ಯಕ್ಷ ಎಚ್. ಶೇಖಣ್ಣ, ಕೊಡ್ಲೆ ಮಲ್ಲಿಕಾರ್ಜುನ, ಎಚ್. ಹುಸೇನಪ್ಪ ಹಾಗೂ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article