ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ವಿನಾಶ ಸಲ್ಲ

KannadaprabhaNewsNetwork |  
Published : May 18, 2026, 02:00 AM IST
ಕ | Kannada Prabha

ಸಾರಾಂಶ

ನದಿಗಳು ನಮಗೆ ಬದುಕು, ಭಾಷೆ, ಸಂಸ್ಕೃತಿ ಹಾಗೂ ಉದ್ಯಮಗಳನ್ನು ಕಲಿಸಿದವು. ಆದರೆ ಇಂದು ಅವುಗಳನ್ನು ಮರೆಯುವ ಹಂತಕ್ಕೆ ಬಂದಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ವಿನಾಶವಾಗುತ್ತಿರುವುದು ಶೋಚನೀಯ ಎಂದು ಶಿರಸಿಯ ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ನದಿಗಳು ನಮಗೆ ಬದುಕು, ಭಾಷೆ, ಸಂಸ್ಕೃತಿ ಹಾಗೂ ಉದ್ಯಮಗಳನ್ನು ಕಲಿಸಿದವು. ಆದರೆ ಇಂದು ಅವುಗಳನ್ನು ಮರೆಯುವ ಹಂತಕ್ಕೆ ಬಂದಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ವಿನಾಶವಾಗುತ್ತಿರುವುದು ಶೋಚನೀಯ ಎಂದು ಶಿರಸಿಯ ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಕಳವಳ ವ್ಯಕ್ತಪಡಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಆದರ್ಶ ಮತ್ತು ಧಾನ್ಯ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರದಂದು ಆಯೋಜಿಸಿದ್ದ ಜಯಮಂಗಲಿ ನದಿ ಪುನಃಶ್ಚೇತನ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಭಿವೃದ್ಧಿಯ ಪಥದಲ್ಲಿ ಸಾಗುವ ಭರದಲ್ಲಿ ಕೆರೆ-ಕುಂಟೆಗಳ ನೀರನ್ನು ಸಂರಕ್ಷಿಸುವುದನ್ನು ನಾವು ಮರೆತಿದ್ದೇವೆ. ನದಿಗಳನ್ನು ಮತ್ತು ನೀರಿನ ಮೂಲಗಳನ್ನು ಹಾಳು ಮಾಡುವಲ್ಲಿ ಮಾನವನೇ ಮೊದಲ ಸ್ಥಾನದಲ್ಲಿದ್ದಾನೆ. ನದಿ ದಂಡೆಯ ಮರಗಳ ನಾಶದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಹಾಗೂ ಬೇಸಿಗೆಯಲ್ಲಿ ಟ್ಯಾಂಕರ್ ನೀರಿನ ಪದ್ಧತಿಯನ್ನು ಅನುಸರಿಸುವಂತಾಗಿದೆ. ಗ್ರಾನೈಟ್ ಬಳಕೆ, ನದಿಗಳನ್ನು ಮರೆತು ಕೊಳವೆಬಾವಿಗಳಿಗೆ ಮುಗಿಬಿದ್ದಿರುವುದು, ನದಿ ನೀರಿಗೆ ಕೊಳಚೆ ನೀರು ಹರಿಸುತ್ತಿರುವುದು, ಜಾಲಿ ಗಿಡಗಳ ವ್ಯಾಪಕ ಬೆಳವಣಿಗೆ, ಕೆರೆಗಳಲ್ಲಿ ಹೂಳು ಎತ್ತದಿರುವುದು ಹಾಗೂ ಅಕ್ರಮ ಮರಳು ದಂಧೆಗಳು ನದಿಗಳನ್ನು ಸಂಪೂರ್ಣವಾಗಿ ಹಾಳು ಮಾಡಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕೆರೆ ನಿರ್ಮಿಸುವುದು, ಹೂಳು ಎತ್ತುವುದು, ಕಾಡು ಬೆಳೆಸುವುದು ಹಾಗೂ ಹಳೆಯ ಮತ್ತು ಹೊಸ ಕ್ರಮಗಳನ್ನು ಸುಧಾರಿಸಿಕೊಳ್ಳುವ ಮೂಲಕ ನದಿ ಪುನಶ್ಚೇತನಕ್ಕೆ ನಾವೆಲ್ಲರೂ ಚಿಂತಿಸಬೇಕಿದೆ. ಮುಖ್ಯವಾಗಿ, ಇತ್ತೀಚೆಗೆ ದಾರಿತಪ್ಪಿ ಹರಿವಿಲ್ಲದೆ ಸಾಗುತ್ತಿರುವ ಯುವಕರು ಕೆರೆ - ನದಿಗಳ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು. ತುಮಕೂರು ವಿವಿ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಮೋಹನ ಎಚ್.ಎಸ್. ಮಾತನಾಡಿ, ನಾಗರಿಕತೆಯ ತೊಟ್ಟಿಲುಗಳಾದ ನದಿಗಳ ಮೂಲಕವೇ ಹಿಂದೆ ಜನರನ್ನು ಗುರುತಿಸಲಾಗುತ್ತಿತ್ತು. ಇಂದು ನದಿಗಳು, ಹಳ್ಳ-ಕೊಳ್ಳಗಳು ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಾರ್ವಜನಿಕರ ಪರವಾಗಿ ಸದಾ ನಿಲ್ಲುವ ತುಮಕೂರು ವಿಶ್ವವಿದ್ಯಾನಿಲಯವು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ನದಿಗಳ ಸ್ವಚ್ಛತೆ ಮಾಡುವ ಕಾರ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಭರವಸೆ ನೀಡಿದರು.ಆರ್ಡರ್ ಸಂಸ್ಥೆಯ ಯೋಜನಾ ನಿರ್ದೇಶಕರಾದ ಡಿ.ವಿ. ರಘು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬದುಕಿನ ಉಳಿವಿಗಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆ ಹಾಗೂ ಹುಲ್ಲುಗಾವಲುಗಳನ್ನು ಕಾಪಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಷ್ಟೇ ಅಲ್ಲದೆ ಸ್ಥಳೀಯ ಸರ್ಕಾರಗಳು ಕೂಡ ಗಂಭೀರವಾಗಿ ಗಮನ ಹರಿಸಬೇಕು ಎಂದರು.ತುಮಕೂರು ವಿವಿ ಕಲಾ ನಿಕಾಯದ ಡೀನ್ ಹಾಗೂ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ಜಿ. ಪರಶುರಾಮ್ ಸ್ವಾಗತಿಸಿದರು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು ಎಂ. ವಂದಿಸಿದರು. ಧ್ಯಾನ ಸಂಸ್ಥೆಯ ಕೃಷಿ ಮತ್ತು ಜಲ ತಜ್ಞರಾದ ಮಲ್ಲಿಕಾರ್ಜುನ ಹೊಸಪಾಳ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯಕ್ಕೆ ಭಾಷೆ ಮಾತ್ರವಲ್ಲ, ರಾಜಕೀಯ ಪ್ರಜ್ಞೆ, ಗ್ರಹಿಕೆ ಮುಖ್ಯ: ಡಾ. ರಂಗನಾಥ
ವಿದೇಶಕ್ಕೂ ಹಾರಿದ ಕಲಬುರಗಿ ಜೋಳದ ರೊಟ್ಟಿ!