ರಸ್ತೆ ಬಂದ್‌: ಜೆಸಿಬಿ ಮೂಲಕ ಜನರ ಸ್ಥಳಾಂತರ

KannadaprabhaNewsNetwork |  
Published : Jun 10, 2024, 12:46 AM IST
ಜೆಸಿಬಿ | Kannada Prabha

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದ ಮುಂದೆ ಹಾಯ್ದು ಹೋಗಿರುವ ಹಳ್ಳ ತುಂಬಿ ಹರಿಯುತ್ತಿರುವದರಿಂದ ಬಸಿನಲ್ಲಿ ಗ್ರಾಮಕ್ಕೆ ಬಂದ ಜನರನ್ನು ಜೆಸಿಬಿ ಮೂಲಕ ಗ್ರಾಮಕ್ಕೆ ಕರೆ ತರಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಭಾನುವಾರವೂ ಮುಂದುವರಿದಿದೆ. ಶನಿವಾರ ಮಧ್ಯಾಹ್ನ ಮತ್ತು ಸಂಜೆ ಉತ್ತಮ ಮಳೆಯಾಗಿದ್ದರಿಂದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ಹಳ್ಳ ತುಂಬಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ, ಜನರನ್ನು ಜೆಸಿಬಿ ಮೂಲಕ ಸ್ಥಳಾಂತರಿಸಲಾಯಿತು.

ತುಂಬಿದ ಹತ್ತರಕಿ ಹಳ್ಳ:

ಮಳೆಯಿಂದಾಗಿ ಯರನಾಳದಿಂದ ಬರುವ ತಾಲೂಕಿನ ಹತ್ತರಕಿಹಾಳ ಗ್ರಾಮದ ಬಳಿ ಹತ್ತರಕಿ ಹಳ್ಳ ತುಂಬಿ ಹರಿಯುತ್ತಿದ್ದು, ಶನಿವಾರ ಸಂಜೆ ಅಪಾರ ಪ್ರಮಾಣದ ಮಳೆಯಿಂದಾಗಿ ಗ್ರಾಮದ ಬಳಿಯ ಸೇತುವೆ ಮೇಲೆ ನೀರು ನುಗ್ಗಿತ್ತು. ಇದರಿಂದ ಸುಮಾರು 4-5 ಗಂಟೆಗಳ ಕಾಲ ಗ್ರಾಮಕ್ಕೆ ವಾಹನ ಸಂಪರ್ಕ ಕೂಡ ಕಡಿತಗೊಂಡಿತ್ತು. ವಾಹನ ಸಂಚಾರ ಬಂದ್ ಆದ ಕಾರಣ ಬಸ್ ಮೂಲಕ ಸೇತುವೆವರೆಗೂ ಗ್ರಾಮಕ್ಕೆ ಬಂದ ಜನರನ್ನು ಜೆಸಿಬಿ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರ ಮಾಡಲಾಯಿತು.

ಮಳೆಯಿಂದಾಗಿ ಹೊಲಗಳಲ್ಲಿನ ಒಡ್ಡು ಒಡೆದಿದ್ದು, ಅಪಾರ ಪ್ರಮಾಣ ಹಾನಿಯಾಗಿದೆ. ಅದರಲ್ಲೂ ಡೋಣಿ ನದಿ ಪಕ್ಕದಲ್ಲಿರುವ ಜಮೀನುಗಳ ಒಡ್ಡು ಒಡೆದು ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಗ್ರಾಮದ ಬಳಿಯಿರುವ ಹತ್ತರಕಿ ಹಳ್ಳದ ಸೇತುವೆಯ ಎತ್ತರವನನ್ನು ಜಾಸ್ತಿ ಮಾಡಿದರೆ ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಗ್ರಾಮದ ಈರಣ್ಣ ಕಲ್ಯಾಣಿ, ಸಂಗಪ್ಪ ಕೌಜಲಗಿ ತಿಳಿಸಿದರು.

ಮಳೆ ವಿವರ:

ತಾಲೂಕಿನ ಮಳೆ ಮಾಪನ ಕೇಂದ್ರದಲ್ಲಿ ಭಾನುವಾರ ಬಸವನಬಾಗೇವಾಡಿ ಕೇಂದ್ರದಲ್ಲಿ 41.2 ಎಂ.ಎಂ, ಹೂವಿನಹಿಪ್ಪರಗಿ ಕೇಂದ್ರದಲ್ಲಿ 5.4 ಎಂಎಂ ಮಳೆ ದಾಖಲಾಗಿದೆ. ತಾಲೂಕಿನಲ್ಲಿ‌ ಯರನಾಳ ಗ್ರಾಮದಲ್ಲಿ ಸುರಿದ ಮಳೆಗೆ ಸಿದ್ದವ್ವ ಶ್ರೀಶೈಲ ವಾಲಿಕಾರ, ತಂಗೆವ್ವ ಮಹದೇವಪ್ಪ ಒಂಟಗುಡಿ ಎಂಬುವರ ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ