ಹೂವಿನಹಡಗಲಿ: ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿ ಮಾಡುವಂತೆ ಒತ್ತಾಯಿಸಿ, ನ. 7ರಂದು ಕಬ್ಬು ಬೆಳೆಗಾರರು ರಸ್ತೆ ತಡೆ ಚಳವಳಿ ಮಾಡುತ್ತೇವೆ ಎಂದು ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿ ಮಾಡುವವರೆಗೂ ಮೈಲಾರ ಸಕ್ಕರೆ ಕಾರ್ಖಾನೆ ಮುಂದೆ, ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ, ಮೈಲಾರ ಕ್ರಾಸ್ ಪೆಟ್ರೋಲ್ ಬಂಕ್ ಹತ್ತಿರ, ಕುರುವತ್ತಿ ಪ್ಲಾಟ್ ಹತ್ತಿರ, ನ. 7ರಂದು ಬೆಳಗ್ಗೆ 7ರಿಂದಲೇ ಅನಿರ್ಧಿಷ್ಟಾವಧಿ ಪೂರ್ಣ ಪ್ರಮಾಣದಲ್ಲಿ ರಸ್ತೆ ತಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆ ನೆರವೇರಿಸುವ ವರೆಗೂ ಶಾಂತಿಯುತ ಹೋರಾಟ ಮಾಡುತ್ತೇವೆ. ಒಂದು ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ, ಸರ್ಕಾರಿ ಸ್ವತ್ತುಗಳಿಗೆ ಮತ್ತು ಕಾರ್ಖಾನೆಯ ಸ್ವತ್ತಿಗೆ ಆಕಸ್ಮಿಕವಾಗಿ ಹಾನಿ ಉಂಟಾದರೆ ಮತ್ತು ಅಹಿತಕರ ಘಟನೆಗಳು ನಡೆದರೆ ಅದಕ್ಕೆ ರೈತರು ಜವಾಬ್ದಾರಲ್ಲ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಮಹೇಂದ್ರಪ್ಪ ಮುಷ್ಠಿ, ಬಸವರಾಜ ಹಾವೇರಿ, ಹನುಮಂತಪ್ಪ ಕೋಡಬಾಳ, ಮಂಜುನಾಥ ಹೊಗೆ ಸೊಪ್ಪಿನವರ್, ಅಶೋಕ ಆರ್. ಬಳಗನೂರು, ಎಚ್. ಪ್ರವೀಣ, ಪ್ರಕಾಶ ಅಂಬ್ಲಿ, ಮಲ್ಲಪ್ಪ ಕೋಡಬಾಳ, ಫಕ್ಕೀರ ಶೆಟ್ರು ಯಲಗಚ್ಚಿನ ಸೇರಿದಂತೆ ಇತರರು ತಹಸೀಲ್ದಾರ್ ಜಿ. ಸಂತೋಷಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.