ಹುಬ್ಬಳ್ಳಿ: ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಯ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಕೇಂದ್ರ ಸರ್ಕಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಇದಕ್ಕಾಗಿ ಪಾಲಿಕೆಯನ್ನು ಗೌರವಿಸಿದೆ.
ಈ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಿದ ದೇಶದ 20 ನಗರ ಪಾಲಿಕೆಗಳನ್ನು ಗೌರವಿಸಲಾಯಿತು. ಜತೆಗೆ ಆ ನಗರ ಪಾಲಿಕೆಗಳು ಪ್ಲಾಸ್ಟಿಕ್ ಮುಕ್ತಗೊಳಿಸಲು ಏನೇನು ಕ್ರಮ ಕೈಗೊಂಡಿವೆ ಎಂಬುದನ್ನು ತಿಳಿಸಲು ಮಳಿಗೆಗಳನ್ನು ಅಳವಡಿಸಲು ಅವಕಾಶಕಲ್ಪಿಸಿತ್ತು. ಜತೆಗೆ ಆ ಬಗ್ಗೆ ಮಾಹಿತಿ ನೀಡಲು ಚರ್ಚಾ ಕೂಟ ಆಯೋಜಿಸಲಾಗಿತ್ತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಇಲ್ಲಿನ ಲಿಂಗರಾಜನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ ಬಳಸಿ 1.1 ಕಿಮೀ ರಸ್ತೆಯನ್ನು ನಿರ್ಮಿಸಿದೆ. ಈ ಮೂಲಕ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಮೊದಲು ಹೆಜ್ಜೆ ಇಟ್ಟಿದೆ. ಇದು ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಮೇಯರ್ ರಾಮಪ್ಪ ಬಡಿಗೇರ, ಆಯುಕ್ತ ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ವಿಜಯಕುಮಾರ ಪಾಲಿಕೆ ಪರವಾಗಿ ಭಾಗವಹಿಸಿ ಗೌರವ ಸ್ವೀಕರಿಸಿದರು. ಮಳಿಗೆಯನ್ನು ಅಳವಡಿಸಿ ಮಾಹಿತಿಯನ್ನೂ ನೀಡಿದರು. ಜತೆಗೆ ಚರ್ಚಾಕೂಟದಲ್ಲಿ ಪಾಲ್ಗೊಂಡಿದ್ದರು.