ರಾಸುಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಪಶು ಪಾಲಿಕ್ಲಿನಿಕ್ ನಿರ್ಮಾಣ: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork | Published : Jun 7, 2025 1:19 AM
ರಾಸುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಪಟ್ಟಣದಲ್ಲಿ ಸುಸರ್ಜಿತ ಪಶು ಪಾಲಿ ಕ್ಲಿನಿಕ್ ಆಸ್ಪತ್ರೆ ನಿರ್ಮಿಸಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಶು ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸಾ ಯಂತ್ರೋಪಕರಣಗಳೊಂದಿಗೆ ತಜ್ಞ ವೈದ್ಯರ ತಂಡವು ಕಾರ್ಯನಿರ್ವಹಿಸಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಸುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಪಟ್ಟಣದಲ್ಲಿ ಸುಸರ್ಜಿತ ಪಶು ಪಾಲಿ ಕ್ಲಿನಿಕ್ ಆಸ್ಪತ್ರೆ ನಿರ್ಮಿಸಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್ ವತಿಯಿಂದ ನಿರ್ಮಿಸುತ್ತಿರುವ ಪಾಲಿ ಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.

ಪಶು ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸಾ ಯಂತ್ರೋಪಕರಣಗಳೊಂದಿಗೆ ತಜ್ಞ ವೈದ್ಯರ ತಂಡವು ಕಾರ್ಯನಿರ್ವಹಿಸಲಿದೆ. ರೈತರಿಗೆ ಇದು ವರದಾನವಾಗಲಿದೆ. ದೊಡ್ಡ ರಾಸುಗಳ ತಪಾಸಣೆಗಾಗಿ ಅಲ್ಟ್ರಾಸೋನೋಗ್ರಾಫಿ, ಪ್ರಾಣಿಗಳ ದೇಹದಲ್ಲಿ ನೋವಿನ ನಿಖರ ತಿಳಿಯಲು ಎಕ್ಸರೇ ಯಂತ್ರ, ಗರ್ಭಧಾರಣಿಗಾಗಿ ಆಧುನಿಕ ಉಪಕರಣ ಸೇರಿದಂತೆ ವಿಶೇಷ ಆಧುನಿಕ ಯಂತ್ರಗಳ ಸೌಲಭ್ಯವಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಮನ್ಮುಲ್ ನಿರ್ದೇಶಕ ಆರ್. ಎನ್.ವಿಶ್ವಾಸ್, ತಾಪಂ ಇಒ ಶ್ರೀನಿವಾಸ್, ಪಶು ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪುರಸಭೆ ಸದಸ್ಯರಾದ ಆನಂದ್, ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ ಸೇರಿದಂತೆ ಇತರರು ಇದ್ದರು.

ನಾಲ್ವಡಿ ಜಯಂತಿ ನಿಮಿತ್ತ ರಾಗಿ ತೆನೆ ಕಟಾವು ಸ್ಪರ್ಧೆ

ಮದ್ದೂರು:

ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ದಿ.ಸಬಲ್ ಮಾಯಪ್ಪರ ಜಮೀನಿನಲ್ಲಿ ಕಾಯಕ ಯೋಗಿಗಳಿಗೆ ರಾಗಿ ತನೆ ಕಟಾವು ಸ್ಪರ್ಧೆ ನಡೆಯಿತು.

ಅನನ್ಯ ಹಾರ್ಟ್ ಸಂಸ್ಥೆ, ಅನಿಲ್ ದ್ರಾವಿಡ್ ಕ್ರೀಡಾ ಬಳಗ ಆಬಲವಾಡಿ ವತಿಯಿಂದ ನಡೆದ ಪಂದ್ಯಾವಳಿಯಲ್ಲಿ 20 ಮಂದಿ ಮಹಿಳೆಯರು ಸ್ಪರ್ಧಿಸಿ ನಿಗದಿತ 30 ಮೀಟರ್ ಉದ್ದ, ಮೂರು ಸಾಲು ರಾಗಿ ತೆನೆಯನ್ನು 20 ನಿಮಿಷದೊಳಗೆ 40 ಕೆಜಿ ತೆನೆ ಕಟಾವು ಮಾಡಬೇಕಿತ್ತು.

ಸ್ಪರ್ಧೆಯಲ್ಲಿ 40 ಕೆಜಿ ತೆನೆ ಕಟಾವು ಮಾಡಿದ ಮಾರಂಗೆರೆ ಗ್ರಾಮದ ಶೋಭ ಪ್ರಥಮ, 37 ಕೆಜಿ ತೆನೆ ಅದೇ ಗ್ರಾಮದ ಲಕ್ಷಮ್ಮ ದ್ವೀತಿಯ, 35 ಕೆಜಿ ತೆನೆ ಆಬಲವಾಡಿ ಗ್ರಾಮದ ಭವ್ಯ ತೃತೀಯ ಬಹುಮಾನ ಪಡೆದರು. ಸಮಧಾನಕರ ಬಹುಮಾನವನ್ನು ರೇಣುಕಮ್ಮ ಪಡೆದರು.

ದ್ರಾವಿಡ್ ಕ್ರೀಡಾ ಬಳಗದ ಅಧ್ಯಕ್ಷ ಆಬಲವಾಡಿ ಅನಿಲ್ ಕುಮಾರ್, ಗ್ರಾಮದ ರೈತ ಮುಖಂಡರಾದ ಪುಟ್ಟಸ್ವಾಮ, ಚಿಕ್ಕತಿಮ್ಮಯ್ಯ, ಲೋಕೇಶ್, ತಿಮ್ಮೇಶ್ , ಚೇತನ್, ನವೀನ್, ಜಯಲಕ್ಷ್ಮಿ ಮ್ಮ ಕೆಂಪಮ್ಮ ಉಪಸ್ಥಿತರಿದ್ದರು.