ಪ್ರಶಾಂತ ಶೆಟ್ಟಿ ಅಭಿಮತ । ನರಸಿಂಹರಾಜಪುರ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣವರೆಗೆ ರಸ್ತೆ ಅಗಲೀಕರಣಕ್ಕೆ ಚಾಲನೆ
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಅನುದಾನ ನೀಡಿದ್ದು ರಸ್ತೆ ಅಗಲೀಕರಣದಿಂದ ಮುಂದೆ ನೂರಾರು ವರ್ಷ ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.
ಭಾನುವಾರ ಪ್ರವಾಸಿ ಮಂದಿರ ಸಮೀಪದಲ್ಲಿ ₹60 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಮ್ಮ ಹುಟ್ಟೂರಿನ ಅಭಿಮಾನದಿಂದ ನರಸಿಂಹರಾಜಪುರಕ್ಕೆ ಕೋಟ್ಯಂತರ ರು. ಅನುದಾನ ತಂದಿದ್ದಾರೆ. ರಸ್ತೆ ಅಗಲೀಕರಣಕ್ಕೂ ₹60 ಕೋಟಿ ರು. ತರಲು ಎಂ.ಶ್ರೀನಿವಾಸ್ ಸಹ ಕಾರಣ ಎಂದರು.ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೆಲವು ತಿಂಗಳ ಹಿಂದೆ ಎನ್.ಆರ್.ಪುರಕ್ಕೆ ಬಂದಿದ್ದಾಗ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಸಿದ್ದರಾಮಯ್ಯ ಹೆಸರು ಇಲ್ಲಿನ ಜನರ ಹೃದಯದಲ್ಲಿ ಶಾಶ್ವತವಾಗಿದೆ. ಈ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ನಾಮಕರಣಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಂ.ಶ್ರೀನಿವಾಸ್ ಅವರ ಆಹ್ವಾನದ ಮೇರೆಗೆ ಸಣ್ಣ ಊರಾದ ಎನ್.ಆರ್.ಪುರಕ್ಕೆ ಮೂರು ಬಾರಿ ಭೇಟಿ ನೀಡಿ ಇಲ್ಲಿನ ಜನರಿಗೆ ಸಂತೋಷ ತಂದಿದೆ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಅನುದಾನ ಬರಲು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಕಾರಣ.ಅಲ್ಲದೆ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಕ್ಷದ 9 ಸದಸ್ಯರು ತಂಡವಾಗಿ ಕೆಲಸ ಮಾಡಿ ದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣವರೆಗೆ ರಸ್ತೆ ಕಿರಿದಾಗಿತ್ತು. ರಸ್ತೆ ಅಗಲೀಕರಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. 1998 ರಲ್ಲಿ ಪಟ್ಟಣದಲ್ಲಿ ಬಡವರಿಗೆ ನಿವೇಶನ ನೀಡಲಾಗಿತ್ತು. ನಂತರ ಈಗ ನಿವೇಶನ ನೀಡಲು ಸಿದ್ಧತೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣಶೆಟ್ಟಿ, ಸುರೈಯಾ ಭಾನು, ಮಾಜಿ ಸದಸ್ಯರಾದ ಸುನೀಲ್, ಸೋಜ, ವಾಸಿಂ, ಮುಕಂದ, ಕೆಡಿಪಿ ಸದಸ್ಯ ಅಂಜುಂ, ನಾಮ ನಿರ್ದೇಶಿತ ಸದಸ್ಯ ಸುಬ್ರಮಣ್ಯ , ಆಶ್ರಯ ಸಮಿತಿ ಸದಸ್ಯ ಸುರತ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಪಟ್ಟಣ ಪಂಚಾಯಿತಿಯ ವಿಜಯಕುಮಾರ್ ಮತ್ತಿತರು ಇದ್ದರು.