ಕರಗ ಉತ್ಸವಕ್ಕಾಗಿ ರಸ್ತೆಗಳ ಅಭಿವೃದ್ಧಿ: ಕೆ.ಶೇಷಾದ್ರಿ

KannadaprabhaNewsNetwork | Published : Jun 29, 2025 1:32 AM

ಗ್ಯಾಸ್ ಸಂಪರ್ಕ ಮತ್ತು ಕುಡಿಯುವ ನೀರಿನ ಸಂಪರ್ಕಕ್ಕೆ ಪೈಪ್‌ಲೈನ್ ಕಾಮಗಾರಿಗಳು ರಸ್ತೆಗಳಲ್ಲಿ ಹಾದು ಹೋಗಿರುವುದರಿಂದ ಸಮಸ್ಯೆ ಆಗಿದ್ದವು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದಲ್ಲಿ ವೈಭವಯುತವಾಗಿ ನಡೆಯುವ ಎರಡು ಕರಗ ಉತ್ಸವಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಸ್ತೆಗಳಿಗೆ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡುವ ಮೂಲಕ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದು ನಗರಸಭಾ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ತಿಳಿಸಿದರು.ನಗರದ ಬಾಲಗೇರಿ ಮತ್ತು ಚಾಮುಂಡೇಶ್ವರಿ ಬಡಾವಣೆಯ ವಾರ್ಡುಗಳಲ್ಲಿ ಯುಐಡಿಎಫ್ ಮತ್ತು ನೆರೆ ಪ್ರವಾಹ ಪೀಡಿತ ಯೋಜನೆಯಡಿಯಲ್ಲಿ ಸಿಸಿ ಕಾಂಕ್ರೀಟ್ ರಸ್ತೆ, ಡಾಂಬರೀಕರಣ ರಸ್ತೆ ಅಭಿವೃದ್ಧಿಗೆ ನೀಡಿ ಅವರು ಮಾತನಾಡಿದರು.

ಗ್ಯಾಸ್ ಸಂಪರ್ಕ ಮತ್ತು ಕುಡಿಯುವ ನೀರಿನ ಸಂಪರ್ಕಕ್ಕೆ ಪೈಪ್‌ಲೈನ್ ಕಾಮಗಾರಿಗಳು ರಸ್ತೆಗಳಲ್ಲಿ ಹಾದು ಹೋಗಿರುವುದರಿಂದ ಸಮಸ್ಯೆ ಆಗಿದ್ದವು. ಬಾಲಗೇರಿ ಮತ್ತು ನಗರದ ಇತರೆ ರಸ್ತೆಗಳಲ್ಲಿ ಕರಗ ಉತ್ಸವಗಳು ಸಂಚರಿಸಿ ಪೂಜೆ ಸ್ವೀಕರಿಸಲಿವೆ. ಕರಗ ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಟ ನಡೆಸಲು ಸಹ ಸಮಸ್ಯೆಯಾಗುತ್ತಿತ್ತು. ಕರಗ ಧಾರಕರಿಗೆ ಸಮಸ್ಯೆ ಆಗಬಾರದೆಂದು ತ್ವರಿತವಾಗಿ ಕೆಲಸ ಮುಗಿಸುವ ಜೊತೆಗೆ ಇಂಜಿನಿಯರ್‌ಗಳು ಸೂಪರ್ ವೈಸಿಂಗ್ ಮಾಡುತ್ತಿದ್ದಾರೆ ಎಂದರು. ಸುಗಮ ರಸ್ತೆ, ವೈಜ್ಞಾನಿಕ ಚರಂಡಿ ನಿರ್ಮಾಣ ಜೊತೆಗೆ ನಗರದ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ನಗರಸಭೆಯ ಪ್ರಥಮ ಆಧ್ಯತೆಯಾಗಿದೆ. ಬಾಲಗೇರಿ ಅರಳೀಮರ ವೃತ್ತದಿಂದ ಮುಖ್ಯರಸ್ತೆ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯದವರೆಗೆ ಪ್ರವಾಹಪೀಡಿತ ಅಭಿವೃದ್ಧಿ ಯೋಜನೆಯಲ್ಲಿ 95 ಲಕ್ಷ ಡಾಂಬರೀಕರಣ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಆಷಾಢ ಮಾಸದಲ್ಲಿ ನಗರದಲ್ಲಿ ಶಕ್ತಿ ದೇವತೆಗಳ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆಸಲಾಗುತ್ತದೆ. ಲಕ್ಷಾಂತರ ಜನರು ನಗರದ ಕರಗ ಮಹೋತ್ಸವಗಳಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.ಈ ಹಿಂದೆಯೇ ಬಾಲಗೇರಿ ರಸ್ತೆ ಡಾಂಬರೀಕರಣ ಅಭಿವೃದ್ಧಿ ಆಗಬೇಕಿತ್ತು. ರಂಜಾನ್ ಹಬ್ಬ ಬಂದಿದ್ದರಿಂದ ವ್ಯಾಪಾರ ಮತ್ತು ಹಬ್ಬ ಆಚರಣೆಗೆ ಸಮಸ್ಯೆಯಾಗುತ್ತದೆ ಎಂದು ಜನರು ಹೇಳಿದ ಹಿನ್ನೆಲೆಯಲ್ಲಿ ಡಾಂಬರೀಕರಣವನ್ನು ನಿಲ್ಲಿಸಲಾಗಿತ್ತು. ಪ್ರಸ್ತುತ ಕರಗ ಉತ್ಸವ ಬಂದಿದ್ದರಿಂದ ಈಗ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ.ಮತ್ತಷ್ಟು ರಸ್ತೆಗಳಲ್ಲಿರುವ ಗುಂಡಿ ರಸ್ತೆ ಸಮಸ್ಯೆಯನ್ನು ತಾತ್ಕಾಲಿಕವಾಗಿ ಸರಿಪಡಿಸಿ ರಸ್ತೆ ಅಭಿವೃದ್ಧಿಪಡಿಸುವವರೆಗೆ ಗುಂಡಿ ಮುಚ್ಚಿ ರಸ್ತೆ ಸರಿಪಡಿಸುವ ಕೆಲಸ ಕೂಡ ಮಾಡಲಾಗುತ್ತಿದೆ. ಜೊತೆಗೆ ಯುಐಡಿಎಫ್ ಯೋಜನೆಯಲ್ಲಿ ಚಾಮುಂಡೇಶ್ವರಿ ದೇವಾಲಯದಿಂದ ಕಾಮಣ್ಣನಗುಡಿ ಸರ್ಕಲ್‌ವರೆಗಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ರಸ್ತೆಗಳು ಅಭಿವೃದ್ಧಿ ಕಂಡಿವೆ ಎಂದು ಶೇಷಾದ್ರಿ ತಿಳಿಸಿದರು.ನಗರಸಭೆ ಸದಸ್ಯರಾದ ಸೋಮಶೇಖರ್ (ಮಣಿ), ಮೊಯಿನ್‌ಪಾಷ, ಗಿರಿಜಮ್ಮ, ಗುರುವೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ , ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ನರಸಿಂಹರಾಜು, ಎಂಜಿನಿಯರ್ ನಿರ್ಮಲಾ, ಶಂಕರ್, ಮುಖಂಡರಾದ ಶ್ರೀನಿವಾಸ್, ನಾರಾಯಣ್, ಗುರುವೇಗೌಡ, ವಿಜಿ, ರಮೇಶ್ ಮತ್ತಿತರರು ಹಾಜರಿದ್ದರು.

---

28ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಬಾಲಗೇರಿ ಮತ್ತು ಚಾಮುಂಡೇಶ್ವರಿ ಬಡಾವಣೆಯ ವಾರ್ಡುಗಳಲ್ಲಿ ಯುಐಡಿಎಫ್ ಮತ್ತು ನೆರೆ ಪ್ರವಾಹ ಪೀಡಿತ ಯೋಜನೆಯಡಿಯಲ್ಲಿ ಸಿಸಿ ಕಾಂಕ್ರೀಟ್ ರಸ್ತೆ, ಡಾಂಬರೀಕರಣ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವೀಕ್ಷಣೆ ಮಾಡಿದರು.