ನರೇಗಲ್ಲ: ಜೀವನದಲ್ಲಿ ಎದುರಾಗುವ ಎಡರು ತೊಡರುಗಳನ್ನು ಸಮರ್ಥವಾಗಿ ಎದುರಿಸಿ ಸಮರ್ಪಕವಾಗಿ ಮುನ್ನಡೆದಾಗ ನಮಗೆ ಯಶಸ್ಸು ಸಿಗಲು ಸಾಧ್ಯ. ಗೃಹರಕ್ಷಕ ಸಿಬಂದಿಗಳು ಕೂಡ ತಮ್ಮೆಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಸ್ಥಳೀಯ ಗಾಂಧಿ ಭವನದಲ್ಲಿ ಶನಿವಾರ ನಡೆದ 21ನೇ ವಾರ್ಷಿಕೋತ್ಸವ, ಗೃಹರಕ್ಷಕ ದಳ ಕಾರ್ಯಲಯದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ್ದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಬಂದಿರುವ ಏಕೈಕ ಸಂಸ್ಥೆಯೇ ಗೃಹ ರಕ್ಷಕದಳವಾಗಿದ್ದು, ನರೇಗಲ್ಲ ಹಾಗೂ ಸುತ್ತಮುತ್ತಲ ಇಪ್ಪತ್ತು ಗ್ರಾಮಗಳಲ್ಲೂ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲೂ ಗೃಹ ರಕ್ಷಕದಳದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಸಿದ್ದನಕೊಳ್ಳದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ವಹಿಸಿದ್ದರು. ಎಂ.ಬಿ. ಸಂಕದ, ರವೀಂದ್ರನಾಥ ದೊಡ್ಡಮೇಟಿ, ಪಪಂ ಅಧ್ಯಕ್ಷ ಫಕೀರಪ್ಪ ಬಸಪ್ಪ ಮಳ್ಳಿ, ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್ಐ ಐಶ್ವರ್ಯ ನಾಗರಾಳ, ಸುರೇಶ ಹಳ್ಳಿಕೇರಿ, ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಬಸವರಾಜ ಗೂಳರಡ್ಡಿ, ಕಿರಣಕುಮಾರ ಕಟಗಿ, ಟಿ.ಎಲ್. ರಾಜಕುಮಾರ, ಎಂ.ಎಸ್. ಧಡೆಸೂರಮಠ, ಅಂದಪ್ಪ ಬಿಚ್ಚುರ, ಶಿವನಗೌಡ ಪಾಟೀಲ, ಹನಮಂತಪ್ಪ ಅಬ್ಬಿಗೇರಿ ಸೇರಿದಂತೆ ಇತರರು ಇದ್ದರು.