ಸಿರಿಗೆರೆ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ವಿಶೇಷ ಅತಿಥಿಯೊಬ್ಬರ ಆಗಮನ ಆಗಲಿದ್ದು, ಇನ್ನು ಮುಂದೆ ನೋಡುಗರು ಮತ್ತು ಮಕ್ಕಳಿಗೆ ರಂಜನೆಯ ತಾಣವಾಗಲಿದೆ. ಅದುವೇ ಮಾನವ ನಿರ್ಮಿತ ಯಾಂತ್ರಿಕ ಆನೆ ರೋಬೋ.ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೩೪ನೆಯ ಶ್ರದ್ಧಾಂಜಲಿ ಸಂದರ್ಭದಲ್ಲಿ ಇದು ಇಲ್ಲಿನ ಪ್ರಮುಖ ಆಕರ್ಷಣೆಯಾಗುತ್ತದೆ.ಮಠದಲ್ಲಿ ಈ ಹಿಂದೆ ಬಸಮ್ಮ, ಅಕ್ಕಮಹಾದೇವಿ ಹಾಗೂ ಭವಾನಿ ಎಂಬ ಮೂರು ಆನೆಗಳು ಇದ್ದವು. ಮಠದ ಬಹುತೇಕ ಧಾರ್ಮಿಕ, ಸಾಮಾಜಿಕ ಆಚರಣೆಗಳಲ್ಲಿ ಅವು ಪ್ರಮುಖ ಪಾತ್ರ ವಹಿಸಿ ನೋಡುಗರನ್ನು ಆಕರ್ಷಿಸುತ್ತಿದ್ದವು. ದಶಕಗಳ ಹಿಂದೆ ಭವಾನಿ ಕೊನೆಯುಸಿರೆಳೆದ ನಂತರ ಮತ್ತೆ ಮಠಕ್ಕೆ ಆನೆಯನ್ನು ತರಿಸುವ ಕೆಲಸಗಳು ಆಗಿರಲಿಲ್ಲ. ಈ ಕೊರತೆ ಎದ್ದು ಕಾಣುತ್ತಿರುವ ವೇಳೆ ರೋಬೋ ಆನೆಯೊಂದು ಮಠದ ಅಂಗಳಕ್ಕೆ ಕಾಲಿಡುತ್ತಿದೆ.ಸಹಜ ಆನೆಗಳಂತೆಯೇ ಇದು ಕಣ್ಣುಗಳನ್ನು ಅರಳಿಸಿ ದಿಟ್ಟಿಸುತ್ತದೆ. ತಲೆ ಅಲ್ಲಾಡಿಸಿ ಬೇಕು ಬೇಡಗಳ ಸಂಜ್ಞೆ ಮಾಡುತ್ತದೆ. ಅಗಲವಾದ ತನ್ನ ಕಿವಿಗಳನ್ನು ಗಾಳಿಪಠದಂತೆ ಬೀಸುತ್ತದೆ. ಬಾಲ ಅಲ್ಲಾಡಿಸುತ್ತದೆ, ತನ್ನ ಉದ್ದನೆಯ ಸೊಂಡಿಲಿನಿಂದ ನೀರು ಎಳೆದುಕೊಂಡು ಚಿಮ್ಮಿಸುತ್ತದೆ. ಜನರನ್ನು ತನ್ನ ಬೆನ್ನಿನ ಮೇಲೆ ಕುಳ್ಳಿರಿಸಿಕೊಂಡು ಸವಾರಿ ಮಾಡಿಸುತ್ತದೆ. ಇಷ್ಟಾದರೂ ಇದು ನಾವು ನೀವು ಅಲ್ಲಲ್ಲಿ ನೋಡಿದ ಆನೆಯಂತಲ್ಲ. ಇದು ರೊಬೋಟಿಕ್ ಆನೆ. ಸಂಪೂರ್ಣ ಮಾನವ ನಿರ್ಮಿತ ತಂತ್ರಜ್ಞಾನದಿಂದ ಸಿದ್ಧಗೊಳಿಸಿದ ಆನೆ. ರೊಬೋಟಿಕ್ ತಂತ್ರಜ್ಞಾನ ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ ಈ ಆನೆಯ ಸೃಷ್ಟಿಯಿಂದ ವಿಸ್ಮಯವೊಂದನ್ನು ಧಾರ್ಮಿಕ ಕ್ಷೇತ್ರದ ಒಳಗೆ ಪ್ರವೇಶ ಮಾಡುತ್ತಿದೆ.ತರಳಬಾಳು ಮಠಕ್ಕೆ ಕೊಡುಗೆಯಾಗಿ ಬರುತ್ತಿರುವ ಈ ಅತಿಥಿಗೆ ಶಿವಕುಂಜರ ಎಂದು ನಾಮಕರಣ ಮಾಡಲಾಗಿದೆ.ತಯಾರಿಸಿರುವುದು ಹೇಗೆ:
ಪ್ರಾಣಿ ಸಂಕುಲ ವಿನಾಶದ ಕಡೆಗೆ ದಾಪುಗಾಲು ಹಾಕುತ್ತಿದೆ. ಅವು ತಮ್ಮ ಸಹಚರರ ಜೊತೆಗೆ ಕಾಡಿನಲ್ಲಿ ವಾಸ ಮಾಡಬೇಕು. ಅವು ತಮಗಿರುವ ಸ್ವತಂತ್ರವನ್ನು ಅನುಭವಿಸಬೇಕು. ಅವು ಬಂಧಿಯಾಗಿ ಮನುಷ್ಯರ ಬಳಿ ಇರಬಾರದು. ಈ ಹಿನ್ನೆಲೆಯಲ್ಲಿ ಪಿಇಟಿಎ ಇಂಡಿಯಾ ಇದುವರೆಗೆ ಇಂತಹ ೧೩ ಆನೆಗಳನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳ ದೇವಾಲಯಗಳಿಗೆ ಕೊಡುಗೆ ನೀಡಿದೆ. ಎರಿಕಾ ಗೋಯಲ್, ನಿರ್ದೇಶಕರು, ಪಿಇಟಿಎ ಶ್ರೀಗಳಿಗೆ ರಕ್ಷಣೆ ಮಾಡಿದ್ದ ಮಠದ ಆನೆಉತ್ತಂಗಿಯಲ್ಲಿ ಗುರುಶಾಂತರಾಜ ಶ್ರೀಗಳ ಮೆರವಣಿಗೆಗೆ ಅಡ್ಡಿಯಾಗಿದ್ದ ಕಿಡಿಗೇಡಿಗಳು ಕಲ್ಲುತೂರಲಾರಂಭಿಸಿದಾಗ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಠದ ಆನೆ ಬಸಮ್ಮ, ಶ್ರೀಗಳಿಗೆ ರಕ್ಷಣೆ ನೀಡಿದ್ದಲ್ಲದೆ ಪ್ರಾಣಾಪಾಯದಿಂದ ಅವರನ್ನು ರಕ್ಷಿಸಿದ್ದ ಘಟನೆಯನ್ನು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಕನ್ನಡಪ್ರಭದೊಂದಿಗೆ ಹಂಚಿಕೊಂಡರು. ಮೆರವಣಿಗೆ ನಿಲ್ಲಿಸಲು ಯತ್ನಿಸಿದ್ದ ಕಿಡಿಗೇಡಿಗಳು ಕಲ್ಲು ತೂರಲಾರಂಭಿಸಿದರು. ಆಗ ಇನ್ನೂ ಬ್ರಿಟಿಷರ ಆಡಳಿತ. ಕಲ್ಲೊಂದು ಬ್ರಿಟೀಷ್ ಅಧಿಕಾರಿಯ ಟೋಪಿಗೆ ಬಿದ್ದು ಟೋಪಿ ನೆಲಕ್ಕುರುಳಿತು. ಆಗ ಕೆರಳಿದ ಅಧಿಕಾರಿ ಆನೆಯ ಸೊಂಡಿಲಿಗೆ ಸರಪಳಿಯೊಂದನ್ನು ಕೊಟ್ಟು ರಕ್ಷಣೆಗೆ ಮುಂದಾಗಲು ಮನವಿ ಮಾಡಿದರು. ಕೂಡಲೇ ಕಾರ್ಯಪ್ರವೃತ್ತವಾದ ಬಸಮ್ಮ ಸರಪಳಿಯನ್ನು ಸುತ್ತಲೂ ಬೀಸತೊಡಗಿತು. ಕಿಡಿಗೇಡಿಗಳು ದಿಕ್ಕಾಪಾಲಾಗಿ ಓಡಿದರು. ಮೆರವಣಿಗೆ ಸಾಂಗವಾಗಿ ನಡೆಯಿತು. ಹೀಗೆ ಮಠದ ಪಟ್ಟದಾನೆ ಬಸಮ್ಮ ಶ್ರೀಗಳನ್ನು ಅಂದು ರಕ್ಷಿಸಿತು ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಠಕ್ಕೆ ಆಗಮಿಸುತ್ತಿರುವ ಹೊಸ ಅತಿಥಿಗೆ ಶಿವಕುಂಜರ ಎಂದು ನಾಮಕರಣ ಮಾಡಲಾಗಿದೆ. ಪಿಇಟಿಎ ಸಂಸ್ಥೆಯವರು ಇದೇ ಸೆ.೨೩ರಂದು ನೀಡಲಿದ್ದಾರೆ. ಇದು ಮಠದ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.- ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ.