ನರಗುಂದ: ಎಲ್ಲ ಕ್ಷೇತ್ರಗಳಲ್ಲಿ ವಿಕಸಿತ ಭಾರತವನ್ನು ಸಾಧಿಸುವಲ್ಲಿ ವಿಜ್ಞಾನಿಗಳ ಪಾತ್ರ ದೊಡ್ಡದಿದೆ ಎಂದು ಹುಲಕೋಟಿಯ ಎಚ್.ಕೆ. ಪಾಟೀಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಜಿತೇಂದ್ರ ಆರ್. ಜಹಗೀರದಾರ ತಿಳಿಸಿದರು.
2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವಾಗಿ ಪರಿವರ್ತಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧ, ಬಾಹ್ಯಾಕಾಶ ಇತ್ಯಾದಿ ಕ್ಷೇತ್ರಗಳಲ್ಲಿನ ವಿಜ್ಞಾನಿಗಳ ಕೊಡುಗೆಗಳು ಬಹಳಷ್ಟು ಮಹತ್ವದ್ದಾಗಿವೆ. ಪ್ರಸಕ್ತ ವರ್ಷದ ಕಾರ್ಯಕ್ರಮದ ಗಮನವು ವೈಜ್ಞಾನಿಕ ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧಗಳು, ಗಣಿತ, ಬಾಹ್ಯಾಕಾಶ ಇತ್ಯಾದಿ ವಿಭಾಗಗಳಲ್ಲಿನ ಲಿಂಗ ಅಂತರವನ್ನು ತುಂಬುವುದು ಮತ್ತು ಆ ಮೂಲಕ ವಿಕಸಿತ ಭಾರತ ಕಡೆಗೆ ಭಾರತದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಆಗಿದೆ ಎಂದರು.
ಉಪನ್ಯಾಸಕ ಎಂ.ಬಿ. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ದಿನಾಚರಣೆಯ ಈ ವರ್ಷದ ಧ್ಯೇಯ ವಿಜ್ಞಾನದಲ್ಲಿ ಮಹಿಳೆ ವಾಕ್ಯವು ಪ್ರಮುಖವಾಗಿದೆ. ನಂದಿನಿ ಹರಿನಾಥ, ರಿತು ಕರಿದಾಳ ಅವರಂಥ ಮಹಿಳಾ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಕಾಲೇಜಿನ ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಭಾರತದ ಮಹಾನ್ ವಿಜ್ಞಾನಿ ಸಿ.ವಿ. ರಾಮನ್ ಅವರು 1928ರ ಫೆ. 28ರಂದು ಬೆಳಕಿನ ಪರಿಣಾಮವನ್ನು ಕಂಡುಹಿಡಿದ ದಿನದ ಸ್ಮರಣೆಗಾಗಿ ಈ ದಿನವನ್ನು ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಬರಿಗಣ್ಣಿಗೆ ಕಾಣುವ ಬೆಳಕು ಬಿಳಿಯಾಗಿದ್ದರೂ ಅದರಲ್ಲಿ ಏಳು ಬಣ್ಣಗಳು ಇರುತ್ತವೆ ಎಂಬುದನ್ನು ಪ್ರಯೋಗದಿಂದ ತೋರಿಸಿದ್ದರು ಎಂದರು.
ಕಾಲೇಜಿನ ವೈ.ಎಂ. ಅನ್ಸಾರಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶೋಭಾ ಮಡಿವಾಳರ ಸ್ವಾಗತಿಸಿದರು. ಭರತ ಬೂದನವರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಬಡಿಗೇರ ವಂದಿಸಿದರು.