ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ರೋಟರಿ ಕ್ಲಬ್ ಸಾಮಾಜಿಕ ಸೇವಾ ಚಟುವಟಿಕೆಗಳ ಜೊತೆಯಲ್ಲಿ ಆರೋಗ್ಯ ತಪಾಸಣೆ ಮೂಲಕ ಸಾರ್ವಜನಿಕರ ಬದುಕಿನಲ್ಲಿ ನೆಮ್ಮದಿ ಮೂಡಿಸುತ್ತಿದೆ. ಭಯಾನಕ ರೋಗಗಳಿಗೆ ತುತ್ತಾಗುವ ಬಡ ಜನರನ್ನು ಸಂರಕ್ಷಣೆ ಮಾಡಲು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ಹಿರಿಯ ರೋಟೇರಿಯನ್ ಡಾ.ಕೆ.ಎಂ.ಜಯಕುಮಾರ್ ತಿಳಿಸಿದರು.
ನಾರಾಯಣ ಹೆಲ್ತ್ ಸೆಂಟರ್ನ ತಜ್ಞ ವೈದ್ಯ ಡಾ.ಪ್ರಜ್ವಲ್ ಮಾತನಾಡಿ, ರೋಟರಿ ಕ್ಲಬ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂತಹ ರೋಗಗಳಿಗೆ ತುತ್ತಾದವರೂ ಬೆಂಗಳೂರಿಗೆ ಬರುವುದು ಕಷ್ಟ. ಆದ್ದರಿಂದ ಇಂತಹ ಶಿಬಿರ ಏರ್ಪಡಿಸಿ ಅವರ ತಪಾಸಣೆ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನ, ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಇಂದು ನಡೆದ ಶಿಬಿರದಲ್ಲಿ ಉತ್ಸಾಹದಿಂದ ಗ್ರಾಮೀಣ ಭಾಗದ ಸುಮಾರು 100ಕ್ಕೂ ಹೆಚ್ಚು ಜನರು ಆಗಮಿಸಿ ತಪಾಸಣೆಗೆ ಒಳಗಾಗಿದ್ದಾರೆ. ಆ ಪೈಕಿ 75 ಜನರಿಗೆ ತಜ್ಞ ವೈದ್ಯರು ಹಲವಾರು ಉಪಯುಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಿದ್ದಾರೆ. ಸಾರ್ವಜನಿಕರ ಸದುಪಯೋಗಕ್ಕಾಗಿ ಕ್ಲಬ್ವತಿಯಿಂದ ಮುಂದಿನ ದಿನಗಳಲ್ಲಿ ವಿವಿಧ ರೋಗಗಳಿಗೆ ಸಂಬಂಧಪಟ್ಟ ಶಿಬಿರಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.ಡಾ.ಎಲ್.ಎಸ್.ವೀರೇಶ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ಇನ್ನರ್ವ್ಹೀಲ್ ಕ್ಲಬ್ ಕಾರ್ಯದರ್ಶಿ ಸುನಿತಾಗೌಡ್ರು, ಪದ್ಮನಾಗರಾಜು, ನಾರಾಯಣಹೆಲ್ತ್ ಸೆಂಟರ್ ವೈದ್ಯರಾದ ಡಾ.ಮಂಜುನಾಥ, ಹನುಮಂತೇಗೌಡ್ರು, ಹರಿಹರಂ ಮುಂತಾದವರು ಭಾಗವಹಿಸಿದ್ದರು.