ಕನ್ನಡಪ್ರಭ ವಾರ್ತೆ ಕೊರಟಗೆರೆ
ಸಿದ್ಧರಬೆಟ್ಟ ರೋಟರಿ ಸಂಸ್ಥೆ ಸಾಮಾಜಿಕ ಚಿಂತನೆಯನ್ನು ಒಳಗೊಂಡು ಕಾಮಧೇನು ಯೋಜನೆ ಪ್ರಾರಂಭಿಸಿ ೨೨೦ಕ್ಕೂ ಹೆಚ್ಚಿನ ರೈತಾಪಿ ಕುಟುಂಬದ ಆರ್ಥಿಕತೆಯ ಜೀವನಕ್ಕೆ ಬೆಳಕನ್ನು ಚೆಲ್ಲಿದೆ ಎಂದು ಸಿದ್ಧರಬೆಟ್ಟದ ಮಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ಸಿಎನ್ ದುರ್ಗಾ ಹೋಬಳಿ ಸಿದ್ಧರಬೆಟ್ಟ ರೋಟರಿ ಸಂಸ್ಥೆ ಕಚೇರಿಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನಕ್ಕೆ ಮಳೆ ಕೈಕೊಟ್ಟು ಬರಗಾಲ ಎದುರಾದ ಸಂದರ್ಭದಲ್ಲಿ ರೋಟರಿ ಸಂಸ್ಥೆಯಿಂದ ನೀಡಿರುವ ಹಸುಗಳು ಕುಟುಂಬಗಳಿಗೆ ಶ್ರೀರಕ್ಷೆಯಾಗಿದೆ. ಜಿಲ್ಲೆಯಲ್ಲಿ ನೀರಿನ ಅಂತರ್ಜಲ ಮಟ್ಟ ವೃದ್ಧಿಗಾಗಿ ಬೋರ್ವೆಲ್ ರಿಚಾರ್ಜ್ ಯೋಜನೆ ಸಹಕಾರಿಯಾಗಿದೆ. ಪ್ರತಿವರ್ಷ ಪ್ರತಿ ಬೋರ್ವೆಲ್ಗೆ ೧೦ಸಾವಿರ ನೀಡುತ್ತಿದ್ದು, ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು. ರೋಟರಿ ಸಂಸ್ಥೆಯ ಹಿರಿಯ ಸದಸ್ಯ ಆರ್.ಟಿ.ಎನ್ ಮಹಾದೇವ್ ಪ್ರಸಾದ್ ಮಾತನಾಡಿ, ಸಿದ್ಧರಬೆಟ್ಟ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದ ಸರೋವರ ಪುನರುಜ್ಜೀವನ ಯೋಜನೆ ಮತ್ತು ಹಸಿರು ಹೊದಿಕೆಯನ್ನು ಗಮನಿಸಲಾಯಿತು. ಪರಿಸರ ಸುಸ್ಥಿರತೆಯನ್ನು ಕಾಪಾಡಲು ಸ್ಥಳೀಯರಿಗೆ ಸಸಿ ವಿತರಣೆಯ ಮಾಡಿದ್ದು, ಸ್ಥಳೀಯ ರೋಟರಿ ಸಂಸ್ಥೆ ಕಾರ್ಯವೈಖರಿ ಅತ್ಯುತ್ತಮಾವಾಗಿದೆ ಎಂದರು. ರೋಟರಿ ಅಧ್ಯಕ್ಷ ಕೆ.ಎನ್ ರಘು ಮಾತನಾಡಿ, ನಮ್ಮ ಸಂಸ್ಥೆಯಿಂದ ಯುವತಿಯರಿಗೆ ಮುಟ್ಟಿನ ನೈರ್ಮಲ್ಯ ಮತ್ತು ಘನತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಕೊರಟಗೆರೆಯ ಸರ್ಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಕಗಳು ಮತ್ತು ದಹನಕಾರಕಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರನ್ನು ಸಬಲೀಕರಣಗೊಳಿಸಲು ಟೈಲರಿಂಗ್ ಮತ್ತು ಬ್ಯೂಟಿಪಾರ್ಲರ್, ಬೋರ್ವೆಲ್ಗಳನ್ನು ರಿಚಾರ್ಜ್ ಮಾಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿಗಳಾದ ಆರ್.ಟಿ.ಎನ್. ಪ್ರಕಾಶ್, ನಾಗರಾಜ್, ಮಂಜುನಾಥ್ ಮತ್ತು ಆರ್.ಟಿ. ನಿರಂಜನ್, ಕಾರ್ಯದರ್ಶಿ ಶಿವಕುಮಾರ್, ದರ್ಶನ್, ದೊಡ್ಡೇಗೌಡ, ಆರ್.ಟಿ. ಗಂಗಾಧರಶಾಸ್ತ್ರಿ. ಡಾ.ದರ್ಶನ್, ಮತ್ತು ಸಿದ್ಧರಬೆಟ್ಟ ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.