ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮದ ಶಿಕ್ಷಕರಾಗಿರುವ ಆರ್.ಬಿ.ಚಂದ್ರು ಮತ್ತು ಕಾಂತಾಮಣಿ ದಂಪತಿ ಪುತ್ರ ಪೂರ್ಣಚಂದ್ರ (26) ನಿವಾಸಕ್ಕೆ ಆಗಮಿಸಿದ ಸಚಿವರು, ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು. ನಂತರ ಮಾತನಾಡಿ, ಕ್ರೀಡಾ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆಯಾಗಿ ಉಳಿಯುಲಿದೆ. ಇಂತಹ ಘಟನೆಯನ್ನು ಯಾರೊಬ್ಬರೂ ಕೂಡಾ ಇದನ್ನು ಊಹೆ ಮಾಡಿರಲಿಲ್ಲ ಎಂದರು.
ಮೃತಪಟ್ಟ ಯುವಕ ಪೂರ್ಣಚಂದ್ರ ಜೀವನದಲ್ಲಿ ಹಲವು ಕನಸುಗಳನ್ನು ಹೊಂದಿದ್ದ ಯುವಕ. ಸರ್ಕಾರ ನೀಡುತ್ತಿರುವ ಪರಿಹಾರ ಅವರ ಸಮಾಧಾನಕ್ಕಷ್ಟೆ. ಕುಟುಂಬದ ನೋವನ್ನು ಹಣದಿಂದ ಭರಿಸಲು ಸಾಧ್ಯವಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದೆ. ತಪ್ಪನ್ನು ಯಾರೆ ಮಾಡಿರಲಿ ಅವರಿಗೆ ಶಿಕ್ಷೆಯಾಗುತ್ತದೆ ಎಂದರು.ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ಘೋಷಿಸಿದ್ದ ರಾಜ್ಯ ಸರ್ಕಾರ ಆನಂತರ ಎಲ್ಲರೊಂದಿಗೆ ಚರ್ಚಿಸಿ ಪರಿಹಾರದ ಮೊತ್ತವನ್ನು 25 ಲಕ್ಷ ರು.ಗಳಿಗೆ ಹೆಚ್ಚಿಸಿತು. ಅದನ್ನು ಇಂದು ಕುಟುಂಬಸ್ಥರಿಗೆ ವಿತರಿಸಿದ್ದೇನೆ. ಈ ಪರಿಹಾರದ ಜೊತೆಗೆ ಆರ್ಸಿಬಿಯಿಂದ 10 ಲಕ್ಷ, ಕರ್ನಾಟಕ ಕ್ರಿಕೆಟ್ ಅಸೋಷಿಯನ್ 5 ಲಕ್ಷ ಪರಿಹಾರ ಘೋಷಿಸಿದೆ. ಇದರಿಂದ ಪ್ರತಿ ಕುಟುಂಬಕ್ಕೂ ಒಟ್ಟು 40 ಲಕ್ಷ ರು. ಪರಿಹಾರ ದೊರಕಲಿದೆ ಎಂದರು.ಇಂತಹ ಘಟನೆಗಳು ನಡೆದಾಗ ಎಲ್ಲರೂ ಕೂಡಾ ಸರ್ಕಾರಕ್ಕೆ ಬೆಂಬಲವಾಗಿ ನಿಂತು ಮುಂದೆ ಕರಾಳ ಘಟನೆ ನಡೆಯದ ಹಾಗೆ ಎಚ್ಚರವಹಿಸುವ ಸಲಹೆ ನೀಡಬೇಕು. ಆದರೆ, ವಿಪಕ್ಷಗಳು ದೂರುತ್ತಿರುವುದು ಸರಿಯಲ್ಲ ಎಂದರು.
ಮೃತ ಪೋಷಕರಿಗೆ ಕ್ಷಮಿಸಪ್ಪಾ. ನಮ್ಮ ಕೈಯಿಂದ ಇಷ್ಟನ್ನೆ ಮಾಡಲಾಗುವುದು. ನಿಮ್ಮ ಅಳಿಯನಿಗೆ ಕೆ.ಆರ್.ಪೇಟೆ ಫುಡ್ಪಾರ್ಕ್ನಲ್ಲಿ ನೌಕರಿ ಕೊಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಭರವಸೆ ನೀಡಿದರು.
ಈ ವೇಳೆ ಶಾಸಕ ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಕೃಷಿಕ ಸಮಾಜದ ನಿರ್ದೇಶಕ ಹೆತ್ತಗೋನಹಳ್ಳಿ ನಾರಾಯಣಗೌಡ ಸೇರಿದಂತೆ ಹಲವರಿದ್ದರು.