. ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ 3.40 ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಹೊಂದಿದ್ದು, ಆಸ್ತಿ ತೆರಿಗೆಯನ್ನು ಹೊರೆ ಆಗದಂತೆ ಏರಿಸುವುದು ಹಾಗೂ ಪರಿಣಾಮಕಾರಿಯಾಗಿ ಸಂಗ್ರಹಿಸುವುದು ಪಾಲಿಕೆಯ ಪ್ರಮುಖ ಯೋಜನೆ.
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಧಾರವಾಡ
ತೀವ್ರವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮೂಲಭೂತ ಸೌಕರ್ಯ ಸೇರಿದಂತೆ ಇತರ ಬೇಡಿಕೆಗಳನ್ನು ಪೂರೈಸಲು ಅನುದಾನದ ಕೊರತೆ ಎದುರಿಸುತ್ತಿರುವ ಹು-ಧಾ ಮಹಾನಗರ ಪಾಲಿಕೆಯು ಹೆಚ್ಚುವರಿ ಆದಾಯ ಗಳಿಸಲು ಪರ್ಯಾಯ ಮಾರ್ಗಕ್ಕೆ ಮೊರೆ ಹೋಗಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಸುಸ್ತಾಗಿ ಹೋಗಿರುವ ಜನರಿಗೆ ಮತ್ತೆ ತೆರಿಗೆ ಏರಿಕೆಯ ಚಿಂತನೆಯು ಗಾಯದ ಮೇಲೆ ಬರೆ ಎಳೆದಂತಾಗಬಹುದು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆರಿಗೆ ಏರಿಸಲು ಸದಸ್ಯರಿಂದ ತೀವ್ರ ವಿರೋಧವಾಗಿದೆ. ತೆರಿಗೆ ಹೊರೆ ಹೆಚ್ಚಿಸಿ ಜನರ ಆಕ್ರೋಶ ಎದುರಿಸಬೇಕಾಗಿರುವುದರಿಂದ ಇದು ಸುಲಭದ ಮಾತಲ್ಲ. ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ 3.40 ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಹೊಂದಿದ್ದು, ಆಸ್ತಿ ತೆರಿಗೆಯನ್ನು ಹೊರೆ ಆಗದಂತೆ ಏರಿಸುವುದು ಹಾಗೂ ಪರಿಣಾಮಕಾರಿಯಾಗಿ ಸಂಗ್ರಹಿಸುವುದು ಪಾಲಿಕೆಯ ಪ್ರಮುಖ ಯೋಜನೆ.
₹3.5ಯಿಂದ ₹20 ಕೋಟಿಗೆ
ತೆರಿಗೆ ಏರಿಸುವುದಕ್ಕಿಂದ ಮುಖ್ಯವಾಗಿ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ (ಸ್ಟಾಲೇಜ್) ಶುಲ್ಕವನ್ನು ಪರಿಷ್ಕರಿಸಲು ಪಾಲಿಕೆ ಯೋಜನೆ ಹೊಂದಿದೆ. ಪಾಲಿಕೆಗೆ ವಾಣಿಜ್ಯ ಮಳಿಗೆಗಳ ಶುಲ್ಕ ಮತ್ತೊಂದು ಪ್ರಮುಖ ಆದಾಯ-ಉತ್ಪಾದಿಸುವ ಮೂಲವಾಗಿದೆ. ಮೂವರು ವರ್ಷಗಳಿಂದ ಈ ಶುಲ್ಕವನ್ನು ಪರಿಷ್ಕರಿಸದಿರುವುದು ಅನುದಾನ ಸಂಗ್ರಹಿಸಲು ಉತ್ತಮ ಮಾರ್ಗವಾಗಿದೆ. ಅಧಿಕಾರಿಗಳ ಪ್ರಕಾರ, ಎಚ್ಡಿಎಂಸಿ 1,513 ಕಾಂಪ್ಲೆಕ್ಸ್ಗಳನ್ನು ಗುತ್ತಿಗೆಗೆ ನೀಡಲಾಗಿದೆ. ಅವುಗಳಲ್ಲಿ 1,015 ಹುಬ್ಬಳ್ಳಿಯಲ್ಲಿ ಮತ್ತು 492 ಧಾರವಾಡದಲ್ಲಿವೆ. ತನ್ನ ಸ್ವಂತ ಆಸ್ತಿಯಿಂದ ಎಚ್ಡಿಎಂಸಿ ಕೇವಲ ₹3.48 ಕೋಟಿ ಆದಾಯ ಗಳಿಸುತ್ತಿದೆ. ಇದು ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಮೂಲದಿಂದ ₹20ರಿಂದ ₹30 ಕೋಟಿ ಆದಾಯ ಗಳಿಸುವ ಯೋಚನೆ ಪಾಲಿಕೆಯದ್ದು.
ಇದರೊಂದಿಗೆ ಹಲವು ಬಾರಿ ಪಾಲಿಕೆ ಸದಸ್ಯರು ಶುಲ್ಕ ಪರಿಷ್ಕರಣೆಗೆ ಮುಂದಾಗದ ಕಾರಣ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಸ್ಟಾಲೇಜ್ ಶುಲ್ಕವನ್ನು ಪರಿಷ್ಕರಿಸುವ ಅಧಿಕಾರಿಗಳ ಪ್ರಯತ್ನ ಬಹುತೇಕ ಸಾಮಾನ್ಯ ಸಭೆಯಲ್ಲಿ ಹಿಂದೇಟು ಅನುಭವಿಸಿದೆ. ಕಳೆದ ಸಭೆಯಲ್ಲೂ ಪಾಲಿಕೆ ಸದಸ್ಯರು ವಿರೋಧಿಸಿದರೂ ಹರಾಜು ಹಾಕಲು ಒಪ್ಪಿಗೆ ಸೂಚಿಸಿದ್ದು ಪಾಲಿಕೆಗೆ ಸಮಾಧಾನದ ಸಂಗತಿ.
ಪಾಲಿಕೆಯು ರಾಜ್ಯ ಸರ್ಕಾರಕ್ಕೆ ನಿಯೋಗವನ್ನು ಕೊಂಡೊಯ್ಯುವುದು ಮತ್ತು ಪ್ರತಿ ವರ್ಷ ತಮಗೆ ಬರಬೇಕಾದ ಅನುದಾನಕ್ಕಾಗಿ ಹಾತೊರೆಯುವುದು ಸಾಮಾನ್ಯವಾಗಿದೆ. ಇಷ್ಟಾಗಿಯೂ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕವಾಗಿ ಕುಗ್ಗಿದ್ದು ಪಾಲಿಕೆಗೆ ಧಾರಾಳತನದಿಂದ ನೀಡುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಆಂತರಿಕವಾಗಿ ಅನುದಾನ ಸೃಷ್ಟಿಸುವುದು ಹು-ಧಾ ಮಹಾನಗರ ಪಾಲಿಕೆಗೆ ಅನಿವಾರ್ಯವೂ ಆಗಿದೆ.
ಕೋಟ್...
ಸ್ಟಾಲೇಜ್ ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ಸ್ಥಾಯಿ ಸಮಿತಿಗೆ ಸಲ್ಲಿಸಲಾಗಿದ್ದು, ಜು. 31ರಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದು ಹರಾಜು ಹಾಕಲು ಒಪ್ಪಿಗೆ ದೊರೆತಿದೆ. ₹20 ಕೋಟಿ ಹೆಚ್ಚುವರಿ ಆದಾಯ ಪಡೆಯಲು ಇದರಿಂದ ಅನುಕೂಲ ಆಗಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.