ಮಳವಳ್ಳಿ ಪುರಸಭೆಯಲ್ಲಿ 64 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ಮಳವಳ್ಳಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ ಅವರು 2025-26ನೇ ಸಾಲಿನ 64 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದರು.ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 33,86,62,000 ಗಾತ್ರದ ಬಜೆಟ್ ಪ್ರತಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಓದಿದರು. ನಂತರ ಸಭೆಯಲ್ಲಿ ಅಂಗಿಕರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ ಅವರು 2025-26ನೇ ಸಾಲಿನ 64 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದರು.ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 33,86,62,000 ಗಾತ್ರದ ಬಜೆಟ್ ಪ್ರತಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಓದಿದರು. ನಂತರ ಸಭೆಯಲ್ಲಿ ಅಂಗಿಕರಿಸಲಾಯಿತು.

2024-25ರ ಪರಿಸ್ಕೃತ ಹಾಗೂ 2025-26ನೇ ಸಾಲಿನ ಆಯವ್ಯಯದಲ್ಲಿ ಆರಂಭ ಶಿಲ್ಕು ಅಂದಾಜು 4.26 ಕೋಟಿಯೊಂದಿಗೆ ಪುರಸಭೆ ವಿವಿಧ ಮೂಲಗಳಿಂದ 4.94 ಕೋಟಿ ರು. ಆದಾಯ ಹಾಗೂ 23.22 ಕೋಟಿ ರು.ನ ಕೇಂದ್ರ ಮತ್ತು ರಾಜ್ಯದ ನಿರೀಕ್ಷಿತ ಅನುದಾನದ ಸೇರಿದಂತೆ ಒಟ್ಟು ಆದಾಯ 33,86,62,000 ಸಂಗ್ರಹವಾಗುವ ನಿರೀಕ್ಷೆ ಇದೆ. ಅದರಲ್ಲಿ 33,21,62,000 ರು. ವೆಚ್ಚ ಅಂದಾಜಿಸಲಾಗಿದೆ. 64 ಲಕ್ಷ ರು. ಉಳಿತಾಯವನ್ನು ನಿರೀಕ್ಷಿಸಲಾಗಿದೆ.

ನಿರೀಕ್ಷಿತ ಆದಾಯದಲ್ಲಿ ಆಸ್ತಿ ತೆರಿಗೆ, ದಂಡ, ಕರಗಳ ಸಂಗ್ರಹಣ ಸುಲ್ಕದಿಂದ 203.9 ಲಕ್ಷ, ಅಭಿವೃದ್ದಿ ಶುಲ್ಕ 120 ಲಕ್ಷ, ಘನ ತ್ಯಾಜ್ಯದಿಂದ 22 ಲಕ್ಷ, ನೀರು ಸರಬರಾಜು 55.20, ಉದ್ದಿಮೆ ಶುಲ್ಕ 20 ಲಕ್ಷ, ಖಾತಾ ವರ್ಗವಣೆ ಶುಲ್ಕ 2.5 ಲಕ್ಷ, ಕಟ್ಟಡ ಪರವಾನಗಿ ಶುಲ್ಕ 20 ಲಕ್ಷ, ರಾಜ್ಯ ಸರ್ಕಾರದ ಮುದ್ರಾಂಕ ಶುಲ್ಕ 5 ಲಕ್ಷ, ಬ್ಯಾಂಕ್ ಖಾತೆ ಬಡ್ಡಿ ಸಂಗ್ರಹಣೆ 13 ಲಕ್ಷ, ಜಾಹಿರಾತು ಶುಲ್ಕ 1.5 ಲಕ್ಷ, ಮಾರುಕಟ್ಟೆ ಶುಲ್ಕ 18 ಲಕ್ಷ, ಆಸ್ತಿ ತೆರಿಗೆಯಿಂದ ವಸೂಲಾಗುವ ಕರಗಳು, 143.70 ಲಕ್ಷ, ಬೀದಿ ದೀಪ ಮತ್ತು ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ಬಿಲ್ ಎಸ್‌ಎಫ್‌ಸಿ ವಿದ್ಯುತ್ ಅನುದಾನ 548 ಲಕ್ಷ, ನಗರ ಸಭೆ ಖಾಯಂ ನೌಕರರ ವೇತನ ಅನುದಾನ 400.81 ಲಕ್ಷ, 15ನೇ ಹಣಕಾಸು ಯೋಜನೆ ಅನುದಾನ 208 ಲಕ್ಷ, ಸ್ವಚ್ಚಭಾರತ್ ವಿಷನ್ ಯೋಜನೆಯಡಿ ಐಇಸಿ ಚಟುವಟಿಕೆಗಳಿಗಾಗಿ ಅನುದಾನ 200 ಲಕ್ಷ ರೂ ನಿರೀಕ್ಷಿತ ಬಜೆಟ್ ಆಗಿದೆ ಎಂದರು.

ಪಟ್ಟಣದ ವ್ಯಾಪ್ತಿಯ ರಸ್ತೆಗಳು, ಕಲ್ಲುಹಾಸುಗಳು, ಪಾದಚಾರಿ ಮಾರ್ಗಗಳು, ಮಳೆ ನೀರು ಚರಂಡಿ ಹಾಗೂ ಸೇತುವೆಗಳ ನಿರ್ಮಾಣ ಕಾಮಗಾರಿಗೆ 5 ಕೋಟಿ, ಮಾರುಕಟ್ಟೆ ಮತ್ತು ಕಾಂಪ್ಲೆಕ್ಸ್ ನಿರ್ಮಾಣಕ್ಕೆ 4 ಕೋಟಿ, ಸಾರ್ವಜನಿಕ ಶೌಚಾಲಯ, ಎಲ್ಲ ಸಮುದಾಯಗಳ ರುದ್ರ ಭೂಮಿಗಳು ಹಾಗೂ ಉದ್ಯಾನಗಳ ಅಭಿವೃದ್ಧಿಗೆ 1.20 ಕೋಟಿ, ಘನ ತ್ಯಾಜ್ಯ ವಸ್ತು ನಿರ್ವಹಣೆ, ನೆಲಭರ್ತಿ ಅಭಿವೃದ್ಧಿ, ಯಂತ್ರೋಪಕರಣಗಳ ಹಾಗೂ ವಾಹನಗಳ ಖರೀದಿಗೆ 2.70 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ 42 ಲಕ್ಷ, ಪೌರ ಕಾರ್ಮಿಕರ ಆರೋಗ್ಯ ವಿಮೆ, ಸಾಮಾಗ್ರಿಗಳನ್ನು ನೀಡಲು, ದಿನಾಚರಣೆಗೆ 15 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದ, ಹಿಂದುಳಿದ ವರ್ಗಗಳ ಮತ್ತು ವಿಕಲಚೇತನರ ಕಲ್ಯಾಣ ನಿಧಿಗಳಿಂದ ಹಾಗೂ ರಾಜಸ್ವ ವೆಚ್ಚಗಳಿಗಾಗಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ52 ಲಕ್ಷಗಳನ್ನು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿ ಅನುದಾನ ಮೀಸಲಿರಿಸಲಾಗಿದೆ ವಿವರಿಸಿದರು.

ಪುರಸಭೆ ಸದಸ್ಯ ಸಿದ್ದರಾಜು ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರು ಆಗಮಿಸಿ ಮುಕ್ತಿ ವಾಹನ ಖರೀದಿಸುವುದು ಹಾಗೂ ವಿದ್ಯುತ್ ಚಿತಗಾರ ನಿರ್ಮಿಸಲು ಮೀಸಲಿಟ್ಟಿರುವ ಅನುದಾನ ಕಡಿಮೆ ಇದ್ದು, ಹೆಚ್ಚುವರಿಯಾಗಿ ಹಣ ಸೇರಿಸಬೇಕೆಂದು ತಿಳಿಸಿದರು.

ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಪತ್ರಕರ್ತರ ವೈದ್ಯಕೀಯ ವೆಚ್ಚವನ್ನು 2 ಲಕ್ಷದಿಂದ 3 ಲಕ್ಷಕ್ಕೆ ಏರಿಸುವುದರ ಜೊತೆಗೆ ನಿಯಮಗಳನ್ನು ಸಡಿಲಿಕೆ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸುತ್ತಲಿನ ಅಭಿವೃದ್ಧಿಗೆ 50 ಲಕ್ಷ ರು.ವನ್ನು ಮೀಸಲಿಟ್ಟಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್.ಬಸವರಾಜು, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಹಾಗೂ ನೌಕರರು ಇದ್ದರು.

Share this article