ಭಟ್ಕಳದಲ್ಲಿ ಅದ್ಧೂರಿಯಾಗಿ ನಡೆದ ಆರೆಸ್ಸೆ ಶತಾಬ್ದಿ ವರ್ಷಾಚರಣೆ
ಕನ್ನಡಪ್ರಭ ವಾರ್ತೆ ಭಟ್ಕಳರಾಷ್ಟ್ರೀಯ ಸ್ವಯಂ ಸೇವಕ ಸಂಘ ನಕರಾತ್ಮಕ ಚಿಂತನೆ ಹೊಂದದೇ ಇದೊಂದು ಸಕಾರಾತ್ಮಕ ಚಿಂತನೆಯೊಂದಿಗೆ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆ ಮೂಡಿಸುವ ಸಂಘವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.
ಪಟ್ಟಣದ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚಣೆ ಮತ್ತು ವಿಜಯ ದಶಮಿ ದಿನದ ಕಾರ್ಯಕ್ರಮದಲ್ಲಿ ಗಣವೇಷಧಾರಿ ಸ್ವಯಂ ಸೇವಕರನ್ನುದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷ ಪೂರೈಸಿದೆ. ಕಳೆದ ನೂರು ವರ್ಷ ಸಂಘಕ್ಕೆ ಸುಲಭವಾಗಿರಲಿಲ್ಲ. ಸಂಘದ ಬಗ್ಗೆ ನಾನಾ ರೀತಿಯ ಟೀಕೆ, ಟಿಪ್ಪಣಿಗಳು ಬಂದರೂ ಸಹ ಎದೆಗುಂದದೇ ಧೈರ್ಯದಿಂದ ಮುನ್ನೆಡೆಸುವ ಕೆಲಸ ಆಗುತ್ತಿದೆ. ಸಂಘ ನೂರು ವರ್ಷದ ಆಚರಣೆಯ ಸಂದರ್ಭದಲ್ಲಿ ಪಂಚ ಪರಿವರ್ತನೆಯಾದ ಕುಟುಂಬ, ಸಾಮರಸ್ಯ, ಪರಿಸರ, ಸ್ವಚ್ಛತೆ, ಸ್ವದೇಶಿ ಬಗ್ಗೆ ಪ್ರತಿ ಮನೆಮನೆಗೂ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಹೊಂದಬೇಕು. ಸುಭದ್ರ ಮತ್ತು ಸುಸ್ಥಿರ ದೇಶ ನಿರ್ಮಾಣಕ್ಕೆ ಕಟಿಬದ್ಧರಾಗಬೇಕು. ಸಮಾಜದಲ್ಲಿರುವ ಗೊಂದಲವನ್ನು ಪರಿಹರಿಸಲು ಸಂಘಟನೆ ಅಗತ್ಯವಾಗಿ ಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಈಶ್ವರ ನಾಯ್ಕ ಮುರುಡೇಶ್ವರ ಮಾತನಾಡಿ, ಸಂಘದ 100 ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಶೈಕ್ಷಣಿ, ಸಾಮಾಜಿಕ, ಧಾರ್ಮಿಕವಾಗಿ ಸಂಘದ ಕಾರ್ಯ ಮಂಚೂಣಿಯಲ್ಲಿದ್ದು, ಸಂಘ ಮತ್ತಷ್ಟು ಬಲಿಷ್ಠವಾಗಲು ನಮ್ಮೆಲ್ಲರ ಸಹಕಾರ ಅಗತ್ಯ ಎಂದರು.ವೇದಿಕೆಯಲ್ಲಿ ಶಿರಸಿಯ ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ಸಭೆಯಲ್ಲಿ ಸಾವಿರಾರು ಗಣವೇಷಧಾರಿಗಳು, ಸಂಘದ ಅಭಿಮಾನಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದಕ್ಕೂ ಪೂರ್ವದಲ್ಲಿ ಪಟ್ಟಣದ ಬೀದಿ ಬೀದಿಯಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಚಿಕ್ಕ ಮಕ್ಕಳೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.