ಆರ್ ಟಿಐ ಕಾರ್ಯಕರ್ತರ ಹಲ್ಲೆ ಪ್ರಕರಣ ಸಿಬಿಐಗೆ ವಹಿಸಿ

KannadaprabhaNewsNetwork | Published : Jan 18, 2024 2:01 AM

ರಾಮನಗರ: ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆ, ಜೀವ ಬೆದರಿಕೆಯಂತಹ ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ರಾಜಾಧ್ಯಕ್ಷ ಹೇಮಂತ್ ನಾಗರಾಜು ಒತ್ತಾಯಿಸಿದರು.

ರಾಮನಗರ: ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆ, ಜೀವ ಬೆದರಿಕೆಯಂತಹ ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ರಾಜಾಧ್ಯಕ್ಷ ಹೇಮಂತ್ ನಾಗರಾಜು ಒತ್ತಾಯಿಸಿದರು.

ನಗರದ ಚೈತನ್ಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಂಘಟನೆಯ ರಾಮನಗರ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಟಿಐ ಕಾರ್ಯಕರ್ತರ ಮೇಲೆ ನಿರಂತರವಾಗಿ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅಪಘಾತವಾಗುವುದು ಜತೆಗೆ, ಮಾರಾಣಾಂತಿಕ ಹಲ್ಲೆಗಳು ರಾಜ್ಯದಲ್ಲಿ ಕಂಡು ಬರುತ್ತಿದೆ. ಇಂತಹ ಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದರು.

ಸರ್ಕಾರ ಜನರ ತೆರಿಗೆ ಹಣದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ವಾಹನದ ಇಂಧನಕ್ಕೂ ರಾಜ್ಯದ ಜನರ ತೆರಿಗೆ ಹಣ ಬಳಕೆಯಾಗುತ್ತಿದೆ. ಹಾಗಾಗಿ ನಾವು ಅಧಿಕಾರಿಯ ಖಾಸಗಿ ಕುರಿತು ಮಾಹಿತಿ ಕೇಳುವುದಿಲ್ಲ. ಸರ್ಕಾರ ಅಭಿವೃದ್ಧಿ ಅಥವಾ ಆಡಳಿತ ನಡೆಸಲು ನೀಡಿದ ಹಣವನ್ನು ಯಾವ ರೀತಿ ಖರ್ಚು ಮಾಡಿದೆ ಎಂಬುದಾಗಿಯೇ ನಮ್ಮ ಪ್ರಶ್ನೆ ಇರಲಿದೆ ಎಂದು ಹೇಳಿದರು.

ಸರ್ಕಾರದ ಹಣ ಖರ್ಚು ಮಾಡಿದ ಕುರಿತು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದರ ಅರ್ಥವೂ ಭ್ರಷ್ಟಾಚಾರ ನಡೆದಿದೆ ಎಂದು ಆಗುತ್ತದೆ. ಅಧಿಕಾರಿಗಳು ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನಾರೋಗ್ಯ ಹಾಗೂ ಹದಯಾಘಾತದ ನಾಟಕವಾಡುತ್ತಿದ್ದಾರೆ. ಇಂತಹ ಘಟನೆ ಕಂಡುಬಂದರೆ, ರಾಜ್ಯದ ಆಯಾ ಸ್ಥಳದಲ್ಲಿಯೇ ತೆರಳಿ ಸಂಘಟನೆಯ ಮುಖಂಡರಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡದೆ ಪ್ರಶ್ನಿಸಿದವರ ವಿರುದ್ಧವೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಎಂದು ಆರೋಪಿಸಿ ಪ್ರಕರಣ ದಾಖಲಿಸುವುದು ಹೆಚ್ಚಾಗಿದೆ. ಇದಕ್ಕೆಲ್ಲ ಜನರು ಹೆದರುವ ಅವಶ್ಯಕತೆ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕರ್ತವ್ಯದಲ್ಲಿ ಲೋಪದೋಷ ಕಂಡುಬಂದರಲ್ಲಿ ಜನರು ವಿಡಿಯೋ ಚಿತ್ರೀಕರಣ ಮಾಡಿ ಕೊಡಬಹುದು. ಅಂತಹ ಅಧಿಕಾರಿಯ ವಿರುದ್ಧ ಆಡಳಿತ ಸುಧಾರಣಾ ಇಲಾಖೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ತಿಳಿಸಿದರು.

ರಾಜ್ಯದ 31 ಜಿಲ್ಲೆಯಲ್ಲಿ ಜಿಲ್ಲಾ ಸಂಘವನ್ನು ಅಸಿತ್ವಕ್ಕೆ ತರಲಾಗುತ್ತದೆ. ರಾಮನಗರ ಸೇರಿದಂತೆ ರಾಜ್ಯದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾ ಸಂಘಟನೆ ತೆರೆಯಲಾಗಿದೆ. ಶೀಘ್ರದಲ್ಲಿಯೇ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಆರ್‌ಟಿಐ ಕಾರ್ಯಕರ್ತರೆಂದು ಹೇಳಿಕೊಂಡು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಕಂಡು ಬಂದರೆ, ಅಂತವರ ವಿರುದ್ಧ ಸಂಘಟನೆ ಕ್ರಮ ತೆಗೆದುಕೊಳ್ಳುತ್ತಿದೆ. ಇತ್ತೀಚಿಗೆ ಕೊಡಗಿನಲ್ಲಿಯು ಇದೇ ರೀತಿಯ ಪ್ರಕರಣ ಕಂಡು ಬಂದಿತ್ತು. ತಪ್ಪಿತಸ್ಥರ ಕಾರ್ಯರರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ ಹೇಮಂತ್ ನಾಗರಾಜು ತಿಳಿಸಿದರು.

ಸಂಘಟನೆಯ ನೂತನ ಜಿಲ್ಲಾಧ್ಯಕ್ಷ ಸ್ವಾಮಿ ಮಾತನಾಡಿ, ಆರ್‌ಟಿಐ ಕಾರ್ಯಕರ್ತರ ವೇದಿಕೆ ಮೂಲಕ ಜಿಲ್ಲೆಯ ಜನತೆಗೆಮಾಹಿತಿ ಹಕ್ಕು ಬಳಕೆ, ಅನುಕೂಲದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ರಾಮನಗರ ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಆಂಥೋಣಿ ಆಲ್ಬರ್ಟ್ , ದೀಪು, ಆಂಬ್ರೂಸ್ ಜಾರ್ಜ್ , ಜಯಮೇರಿ ಸ್ಮಿತ್, ನಾಗೇಂದ್ರ ಕುಮಾರ್ ಉಪಸ್ಥಿತರಿದ್ದರು.

17ಕೆಆರ್ ಎಂಎನ್ 2.ಜೆಪಿಜಿ

ಕಾರ್ಯಕ್ರಮದಲ್ಲಿ ಹೇಮಂತ್ ನಾಗರಾಜು ಮಾತನಾಡಿದರು.