ಹಾವೇರಿ:ರಾಜ್ಯ ಸಚಿವ ಸಂಪುಟದಲ್ಲಿ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಸೋಮವಾರ ನಗರದಲ್ಲಿ ಸಂಭ್ರಮಾಚರಣೆ ನಡೆಸಿದರು.ನಗರದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಸಚಿವ ಸ್ಥಾನ ದೊರೆತಿರುವುದನ್ನು ಸಂಭ್ರಮಿಸಿದರು. ಈ ವೇಳೆ ರುದ್ರಪ್ಪ ಲಮಾಣಿ ಪರ ಜಯ ಘೋಷಣೆಗಳನ್ನು ಕಾರ್ಯಕರ್ತರು ಮೊಳಗಿಸಿದರು. ಕಾರ್ಯಕರ್ತರು ಸಚಿವ ಸ್ಥಾನ ಲಭಿಸಿರುವುದು ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದ್ದು, ಜಿಲ್ಲೆಯ ಹಲವು ವರ್ಷಗಳ ಬೇಡಿಕೆಗಳಿಗೆ ಈಗ ಸ್ಪಂದನೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ರಸ್ತೆ, ಕುಡಿಯುವ ನೀರು, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ತರಲು ಸಚಿವರು ಶ್ರಮಿಸಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಆನವಟ್ಟಿ ಮಾತನಾಡಿ, ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಕನಸು ಇಂದು ನನಸಾಗಿದೆ. ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಜಿಲ್ಲೆಯ ಜನತೆಗೆ ಸಂದ ಗೌರವ. ಅವರ ನೇತೃತ್ವದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.ಹಾವೇರಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಂದಿಗೆ ಬೆರೆತು ಕೆಲಸ ಮಾಡುವ ನಾಯಕ ರುದ್ರಪ್ಪ ಲಮಾಣಿ. ಅವರ ಸೇವೆಯನ್ನು ಗುರುತಿಸಿ ಪಕ್ಷ ಸಚಿವ ಸ್ಥಾನ ನೀಡಿರುವುದು ಸಂತಸದ ವಿಷಯ. ಜಿಲ್ಲೆಯ ಅಭಿವೃದ್ಧಿಗೆ ಅವರು ಹೊಸ ಚೈತನ್ಯ ತುಂಬಲಿದ್ದಾರೆ ಎಂದು ಹೇಳಿದರು.ಈ ವೇಳೆ ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಬಿಜಾಪುರ, ನಾಗರಾಜ ಬಡೆಮ್ಮನವರ, ವಿನಯ್ ಪಾಲನಕರ, ಅತಾವುಲ್ಲಾ ಖಾಜಿ, ಇಮಾಮ್ ಹಿರೇಮುಗದೂರ, ಮಲ್ಲಿಕಾರ್ಜುನ ಬೂದಗಟ್ಟಿ, ದಾಸಪ್ಪ ಕರ್ಜಗಿ, ಮುತ್ತಪ್ಪ ಕೊರವರ, ಜಮೀರ ಜಿಗರಿ, ಮಲ್ಲಪ್ಪ ಬಂಕಾಪುರ, ಶಂಕರ ಬಾಲಕ್ಕನವರ, ಮೂರ್ತಿ ಕರ್ಜಗಿ, ಶೆಟ್ಟಿ ವಿಭೂತಿ, ಕಂಠೆಪ್ಪಗೌಡ್ರ ವಕೀಲರು, ಕಾಸೀಂಸಾಬ್ ಅಗಡಿ, ಬಸವರಾಜ ಬಣಕಾರ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.