ಒತ್ತಡದ ಜೀವನದಿಂದ ಸಂಸಾರ ಹಾಳು: ಶಂಕರ ಯಂಕಂಚಿ

KannadaprabhaNewsNetwork | Published : Feb 18, 2024 1:37 AM

ಸಾರಾಂಶ

ಸಂಸಾರವೆಂಬ ಸಾಗರದಲ್ಲಿ ಗಂಡು ಮತ್ತು ಹೆಣ್ಣು ನಗು ನಗುತಾ ಜೀವನ ನಡೆಸಿದರೆ ಅದು ಸಸಾರವಾಗುತ್ತದೆ ಎಂದು ಜಾಣರ ಜಗಲಿ ಮುಖಂಡ ಶಂಕರ ಯಂಕಂಚಿ ಹೇಳಿದರು.

ಕನ್ನಡಪ್ರಭವಾರ್ತೆ ಕೊಲ್ಹಾರ: ಸಂಸಾರವೆಂಬ ಸಾಗರದಲ್ಲಿ ಗಂಡು ಮತ್ತು ಹೆಣ್ಣು ನಗು ನಗುತಾ ಜೀವನ ನಡೆಸಿದರೆ ಅದು ಸಸಾರವಾಗುತ್ತದೆ ಎಂದು ಜಾಣರ ಜಗಲಿ ಮುಖಂಡ ಶಂಕರ ಯಂಕಂಚಿ ಹೇಳಿದರು. ಪಟ್ಟಣದ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಜಾಣರ ಜಗಲಿ ನಗೆ ಹಬ್ಬದಲ್ಲಿ ಸಂಸಾರದ ಸಾರ ಗಂಡು ಅಥವಾ ಹೆಣ್ಣು ಎಂಬ ವಿಷಯದ ಚರ್ಚಾಕೂಟದ ನೇತೃತ್ವ ವಹಿಸಿ ಮಾತನಾಡಿದರು. ಇವತ್ತು ಒತ್ತಡದ ಜೀವನದಲ್ಲಿ ಅನೇಕ ಸಂಸಾರಗಳು ಒಡೆದು ಹೋಗುತ್ತಿವೆ. ಸಂಸಾರ ಒಂದು ಎತ್ತಿನ ಬಂಡಿ, ಎರಡು ಗಾಲಿಗಳು ಗಂಡು, ಹೆಣ್ಣು ಇದ್ದಂತೆ, ಮುಂದೆ ಜಗ್ಗುವ ಎತ್ತು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ. ಆದರೆ ಅವುಗಳಲ್ಲಿ ಹೊಂದಾಣಿಕೆ, ತಾಳ್ಮೆ ಹಾಗೂ ನೆಮ್ಮದಿ ಬೇಕು ಎಂದರು.ಸಂಸಾರದ ಸಾರದ ಗಂಡೋ ಅಥವಾ ಹೆಣ್ಣೋ ಚರ್ಚಾಕೂಟದಲ್ಲಿ ಗಂಡಿನ ಪರವಾಗಿ ಮಹಿಳಾ ಸಾಹಿತಿ ಬೋರಮ್ಮ ಪತಂಗಿ, ಯುವ ಮುಖಂಡ ಅಲ್ಲಾಭಕ್ಷ ಬಿಜಾಪುರ, ಯುವ ಕವಿತ್ರಿ ರುದ್ರಮ್ಮ ಗಿಡ್ಡಪ್ಪಗೋಳ, ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ವಾದ ಮಂಡಿಸಿದರೆ, ಹೆಣ್ಣು ಹೆಚ್ಚು ಎಂಬುದರ ಪರವಾಗಿ ಹಿರಿಯ ತಾಯಿ ನಿರ್ಮಲಾ ಶೀಲವಂತ, ವೈಭವಿ ಜ್ಯುವೆಲರ್ಸ್ ಮಾಲಿಕ ಪ್ರಾಣೇಶ ಪತ್ತಾರ, ಮಹಿಳಾ ಸಾಹಿತಿ ಗಾಯತ್ರಿ ಪತ್ತಾರ, ನಿವೃತ್ತ ಶಿಕ್ಷಕ ಶಂಕರಪ್ಪ ಪತಂಗಿ ವಾದ ಮಂಡಿಸಿದರು. ಜಾತ್ರಾ ಕಮಿಟಿಯಿಂದ ಜಾಣರ ಜಗಲಿ ತಂಡವನ್ನ ಸನ್ಮಾನಿ ಗೌರವಿಸಲಾಯಿತು.ಅಧ್ಯಕ್ಷತೆಯನ್ನು ಸಂಗಪ್ಪ ಬಳೂರಗಿ ವಹಿಸಿದ್ದರು. ಅತಿಥಿಗಳಾಗಿ ಈರಣ್ಣ ಔರಸಂಗ, ಉಪನ್ಯಾಸಕ ಮಂಜುನಾಥ ಮಟ್ಯಾಳ, ಸಿ.ಆರ್.ಪಿ ಜಿ.ಆಯ್.ಗೊಡ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಕೊಲ್ಹಾರ ಪಟ್ಟಣದ ಮುಖಂಡರು, ದೇವಾಂಗ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಇದ್ದರು.

Share this article