ರಾಮನಗರ: ಎಸ್ಸಿಪಿ - ಟಿಎಸ್ಪಿ (ಪ.ಜಾತಿ - ಪ.ಪಂಗಡ ವಿಶೇಷ ಘಟಕ )ಯೋಜನೆ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸಲು ಅವಕಾಶ ನೀಡುವ ನಿಯಮ 7 ಸಿ ಅನ್ನು ತೆಗೆಯಬೇಕು. ಇಲ್ಲದಿದ್ದರೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸಲಾಗುವುದು ಎಂದು ಪ್ರಗತಿಪರ ದಲಿತ ಮುಖಂಡರು ಆದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿಪಿ - ಟಿಎಸ್ಪಿ ಅನುದಾನ ಅಗತ್ಯ ಬಿದ್ದರೆ ಬಳಸಬಹುದು ಎಂದಿರುವ 7ಸಿ ಕಾನೂನನ್ನು ಕೂಡಲೇ ರದ್ದು ಮಾಡಿ, ಆಯಾಯ ವರ್ಗದ ಜನರಿಗೆ ಆಯಾಯಾ ಇಲಾಖಾ ಅನುದಾನವನ್ನೇ ಬಳಸಬೇಕೆಂಬ ಕಾಯ್ದೆ ತರಬೇಕೆಂದು ಒತ್ತಾಯಿಸಿದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭವನ್ನು ಎಲ್ಲ ವರ್ಗದ ಜನರು ಪಡೆಯುತ್ತಿದ್ದಾರೆ. ಆದರೆ, ಈ ಯೋಜನೆಗಳಿಗಾಗಿ ಎಸ್ಸಿಪಿ - ಟಿಎಸ್ಪಿ ಹಣ ಬಳಸಿಕೊಳ್ಳಲಾಗುತ್ತಿದೆ. ಪ್ರತಿವರ್ಷ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಕಡಿಮೆಯಾದರೂ ಎಸ್ಸಿಪಿ ಟಿಎಸ್ಪಿಯಿಂದ ಅಗತ್ಯಕ್ಕಿಂತ ಹೆಚ್ಚು ಅನುದಾನ ಪಡೆಯಲಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ದಲಿತರಿಗೆ ದ್ರೋಹ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ನಿಜವಾಗಿಯೂ ದಲಿತರ ಪರವಾಗಿದ್ದರೆ 7ಸಿ ಅನ್ನು ರದ್ದು ಪಡಿಸಲಿ ಎಂದು ಸವಾಲು ಹಾಕಿದರು.
2013ರಿಂದ 2018ರ ಅವಧಿಯಲ್ಲಿ ಕಾಂಗ್ರಸ್ ಸರ್ಕಾರ 7ಸಿ ತೆಗೆದು ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸದಂತೆ ನಿಯಮ ಮಾಡಿತ್ತು. ಆನಂತರ ಬಂದಂತಹ ಸರ್ಕಾರಗಳು ಆ ನಿಯಮವನ್ನು ಮುರಿದವು. 2023ರ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ 7ಸಿ ಅನ್ನು ರದ್ದು ಮಾಡಿ, ಬೇರೆ ಉದ್ದೇಶಗಳಿಗೆ ಬಳಕೆ ಮಾಡದಂತೆ ಕಾನೂನು ರೂಪಿಸುದಾಗಿ ಭರವಸೆ ನೀಡಿತ್ತು. ಇಲ್ಲಿವರೆಗೂ ಆ ಕಾನೂನನ್ನು ಜಾರಿಗೆ ತಂದಿಲ್ಲ ಎಂದು ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಡಾ.ಲೋಕೇಶ್ ಮೌರ್ಯ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ - ಪಂಗಡದ ಫಲಾನುಭವಿಗಳಿಗೆ ಎಸ್ಸಿಪಿ-ಟಿಎಸ್ಪಿ ಹಣದಲ್ಲಿ 2 ಸಾವಿರ ರು.ಗಳನ್ನು ಕೊಡುವುದಾದರೆ ಇನ್ನುಳಿದ ಹಿಂದುಳಿದ ವರ್ಗದವರ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಆಯಾಯ ಇಲಾಖೆಯಿಂದ ಕೊಡುತ್ತಿಲ್ಲ ಏಕೆ. ಇದು ಸರ್ಕಾರ ಪರಿಶಿಷ್ಟರಿಗೆ ಮಾಡುತ್ತಿರುವ ವಂಚನೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಸ್ಸಿಪಿ-ಟಿಎಸ್ಪಿ ವಿಚಾರದಲ್ಲಿ ನುಡಿದಂತೆ ನಡೆದುಕೊಳ್ಳುತ್ತಿಲ್ಲ. 2023ರಲ್ಲಿ ಸುಮಾರು 8 ಸಾವಿರ ಕೋಟಿ, 2024-25ನೇ ಸಾಲಿನಲ್ಲಿ ಅಂದಾಜು 11,400 ಕೋಟಿ ಹಾಗೂ 2025-26 ರಲ್ಲಿ 13,433 ಕೋಟಿ ರು.ಗಳನ್ನು ಪರಿಶಿಷ್ಟರ ಕಲ್ಯಾಣ ನಿಧಿಗೆ ಮೀಸಲಿಟ್ಟ ಹಣದಲ್ಲಿ, ಸರ್ಕಾರದ ಯೋಜನೆಯಾದ ಗ್ಯಾರಂಟಿ ಯೋಜನೆಗೆ ವಿಶೇಷ ಘಟಕ ಯೋಜನೆಯ ಹಣವನ್ನು ಮತ್ತೆ ಮತ್ತೆ ಅನ್ಯ ಕಾರ್ಯಕ್ರಮಗಳಿಗೆ ಬಳಸುತ್ತಿದೆ ಎಂದು ಟೀಕಿಸಿದರು.ಕಳೆದ ಎರಡು ವರ್ಷಗಳಿಂದ ಸರ್ಕಾರ ಮಂಡಿಸುವ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ಸುಮಾರು 52 ಸಾವಿರ ಕೋಟಿ ರು.ಗಳನ್ನು ಪ್ರತಿ ವರ್ಷ ಮೀಸಲಿಡುತ್ತಿದೆ. ಆದರೂ ಸಹ ವಿಶೇಷ ಘಟಕ ಯೋಜನೆಯಲ್ಲಿ ಹಣವನ್ನು ಪಡೆಯುತ್ತಿರುವುದರಿಂದ ಯಾವುದೋ ಷಡ್ಯಂತ್ರವಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ ಎಂದು ಹೇಳಿದರು.
ದಲಿತ ಮುಖಂಡ ಕೆ.ಶಿವಶಂಕರ್ ಮಾತನಾಡಿ, ಸರ್ಕಾರ 2024-25ನೇ ಸಾಲಿನಲ್ಲಿ 4600 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಪ್ರತಿ ವರ್ಷವೂ ಸರ್ಕಾರ ಗ್ಯಾರಂಟಿ ಯೋಜನೆಗೆ ಈ ರೀತಿ ಹೆಚ್ಚುವರಿ ಹಣ ಪಡೆಯುತ್ತಾ ಬಂದಿದೆ. ಆರ್ಥಿಕ ವರ್ಷದ ಅಂತ್ಯದಲ್ಲಿ ಹೆಚ್ಚುವರಿ ಹಣವನ್ನು ಹಿಂದಿರುಗಿಸದೆ ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಎ.ಸಿ.ಕೃಷ್ಣಯ್ಯ, ಶಿವಬಸವಯ್ಯ, ಕನಕಪುರ ಶಿವಲಿಂಗಯ್ಯ, ರಾಜಶೇಖರ್ ಇತರರಿದ್ದರು.
ಕೋಟ್................ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮೊತ್ತದಲ್ಲಿ ಹಣ ಮೀಸಲಿಡುವುದು. ಮೀಸಲಿಟ್ಟ ಹಣವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಬೇರೆ ಯಾವುದಕ್ಕೂ ಈ ಹಣವನ್ನು ಬಳಸಬಾರದೆಂಬ ನಿಯಮವಿದೆ. ಆದರೆ, ಈಗಿನ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿ-ಜೆಡಿಎಸ್ ಸರ್ಕಾರಗಳು ಕೂಡ ಪರಿಶಿಷ್ಟ ಕಲ್ಯಾಣ ನಿಧಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿ ಅನ್ಯಾಯ ಮಾಡಿವೆ.
-ಮತ್ತೀಕೆರೆ ಹನುಮಂತಯ್ಯ, ತಾಪಂ ಮಾಜಿ ಸದಸ್ಯ25ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ತಾಪಂ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಲಿತ ಮುಖಂಡರಾದ ಎ.ಸಿ.ಕೃಷ್ಣಯ್ಯ, ಶಿವಬಸವಯ್ಯ, ಕನಕಪುರ ಶಿವಲಿಂಗಯ್ಯ, ರಾಜಶೇಖರ್ ಇತರರಿದ್ದರು.