ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ
ಸೊಳ್ಳೆಗಳ ಕಾಟ ಹೆಚ್ಚಿದೆ. ಸೊಳ್ಳೆ ನಿಯಂತ್ರಣಕ್ಕೆ ಗ್ರಾಪಂ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮಗಳಲ್ಲಿ ಫಾಗಿಂಗ್ ಮಾಡಿ ಸೊಳ್ಳೆ ನಿಯಂತ್ರಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ಡಂಬಳ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಚರಂಡಿ ಮಲಿನ ನೀರು ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಹೀಗೆ ಆಯಾ ಗ್ರಾಪಂಗಳಲ್ಲಿ ಸ್ವಚ್ಛತಾ ಕಾರ್ಯ ಚುರುಕಾಗಲಿ ಎಂದು ಸರ್ಕಾರ ಸಾವಿರಾರು ಕೋಟಿ ಹಣ ವ್ಯಯಿಸಿ ಸ್ವಚ್ಛತಾ ವಾಹನ ನೀಡಿದ್ದರೂ ಬಳಕೆಯಾಗುತ್ತಿಲ್ಲ. ಕೆಲವು ಗ್ರಾಪಂಗಳಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೆ ದುರವಸ್ಥೆ ತಲುಪಿದೆ.
ಕದಾಂಪುರ, ಡೋಣಿ, ಶಿವಾಜಿನಗರ, ಚುರ್ಚಿಹಾಳ, ಚಿಕ್ಕವಡ್ಡಟ್ಟಿ, ಮೇವುಂಡಿ, ಬರದೂರ, ಯಕ್ಲಾಸಪುರ, ಮುರಡಿ ತಾಂಡಾ, ವೆಂಕಟಾಪುರ, ಜಂತ್ಲಿ ಶಿರೂರ ಸೇರಿದಂತೆ ಡಂಬಳ ಹೋಬಳಿಯ 25 ಗ್ರಾಮಗಳಲ್ಲಿ ಹಲವಾರು ಬಡಾವಣೆಗಳಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಂಜೆಯಾದರೆ ಸಾಕು ಸೊಳ್ಳೆ ಝೇಂಕಾರ ಶುರುವಾಗುತ್ತದೆ. ಹೀಗಾಗಿ ಅನೇಕರು ಸಂಜೆ ಆಗುತ್ತಿದ್ದಂತೆ ಮನೆ ಕಿಟಕಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಜೆಯಿಂದಲೇ ಸೊಳ್ಳೆ ಕ್ವಾಯಿಲ್, ಮಾಸ್ಕಿಟೋ ಮ್ಯಾಟ್ ಮೊದಲಾದವುಗಳನ್ನು ಉರಿಸುವ ಅನಿವಾರ್ಯತೆ ಇದೆ. ಹೀಗಾಗಿ ಕೂಡಲೇ ಡಂಬಳ ಹೋಬಳಿಯ ಗ್ರಾಪಂಗಳಲ್ಲಿ ಫಾಂಗಿಂಗ್ ಮತ್ತು ಸ್ವಚ್ಛತಾ ಕಾರ್ಯ ಆರಂಭಿಸಿ ಮಲಿನ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಾಗಿರುವುದಕ್ಕೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಗ್ರಾಪಂ ಅಧಿಕಾರಿಗಳು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.