ಕನ್ನಡಪ್ರಭ ವಾರ್ತೆ ಕಮತಗಿಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸ್ಥಳೀಯ ಪಪಂ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಅಧ್ಯಕ್ಷ ಬಸವರಾಜ ಪಿ ಕುಂಬಳಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಪಪಂನಿಂದ ₹ 6,63,000 ವೆಚ್ಚದಲ್ಲಿ ಖರೀದಿಸಲಾದ ಬೀದಿ ದೀಪಗಳು ಎಲ್ಲಿವೆ ಎಂದು ಸದಸ್ಯ ಸಂಗಪ್ಪ ಗಾಣಗೇರ ಪ್ರಶ್ನಿಸಿದರು. ಇದಕ್ಕೆ ಸಮರ್ಪಕ ಉತ್ತರ ನೀಡಿದ ಪಪಂ ಮುಖ್ಯಾಧಿಕಾರಿ ಎಫ್‌.ಎನ್‌.ಹುಲ್ಲಿಕೇರಿ ಹಾಗೂ ಸದಸ್ಯರ ನಡುವೆ ಕೆಲಹೊತ್ತು ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಅಲ್ಲದೇ ಮುಖ್ಯಾಧಿಕಾರಿ ಕಾರಿನ ಬಾಡಿಗೆ ₹ 78 ಸಾವಿರ ಹೇಗಾಗುತ್ತದೆ. ಮುಂದಿನ ದಿನಗಲ್ಲಿ ಈ ಹಣವನ್ನು ಬೇರೆ ಕಾರ್ಯಕ್ಕೆ ವಿನಿಯೋಗಿಸುವಂತೆ ಸಲಹೆ ನೀಡಿದರು. ಪಟ್ಟಣದಲ್ಲಿ ಉತಾರ ಒಂದಕ್ಕೆ ₹ 500 ಪಡೆಯಲಾಗುತ್ತಿತ್ತು. ಸದ್ಯಕ್ಕೆ ಖಾತೆ ಬದಲಾವಣೆ ತೆರಿಗೆಯನ್ನು ಶೇ.1ರಿಂದ ಶೇ.2ರಷ್ಟು ಏರಿಕೆ ಮಾಡಿದ್ದೀರಿ ಇದು ನಾಗರಿಕರಿಗೆ ಹೊರೆಯಾಗುತ್ತದೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರಕ್ರಿಯಿಸಿದ ಅಧ್ಯಕ್ಷರು, ನಾಗರಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಪಪಂಗೆ ಹೊರೆಯಾಗುತ್ತಿದ್ದು, ಆದ್ದರಿಂದ ತೆರಿಗೆ ಹೆಚ್ಚಳ ಮಾಡೋಣ ಎಂದರು. ಇದಕ್ಕೆ ಪರವಿರೋಧ ವ್ಯಕ್ತವಾದವು. ಬಳಿಕ ಪೌರಕಾರ್ಮಿಕರ ಖಾಲಿ ಹುದ್ದೆಗಳ ಭರ್ತಿಗೆ ಸದಸ್ಯರು ಸಮ್ಮತಿ ಸೂಚಿಸಿದರು.

ಪಪಂ ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಸದಸ್ಯರಾದ ರಮೇಶ ಜಮಖಂಡಿ, ಸಂಗಪ್ಪ ಗಾಣಗೇರ, ಗುರಲಿಂಗಪ್ಪ ಪಾಟೀಲ, ದೇವಿಪ್ರಸಾದ ನಿಂಬಲಗುಂದಿ, ಚಂದು ಕುರಿ, ಲಕ್ಷ್ಮಣ ಮಾದರ, ಹುಚ್ಚೇಶ ಮದ್ಲಿ, ನಂದಾ ದ್ಯಾಮನ್ನವರ, ರತ್ನಾ ತಳಗೇರಿ, ಹುಚ್ಚವ್ವ ಹಗೇದಾಳ, ಮಂಜುಳಾ ಮುರಾಳ, ಸುಮಿತ್ರಾ ಲಮಾಣಿ, ಬಸವರಾಜ ದಂಡಾವತಿ ಹಾಗೂ ಪಪಂ ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ ಹಾಗೂ ಸಿಬ್ಬಂದಿ ಇದ್ದರು.