ಕೋಮು ಸೌಹಾರ್ದತೆ ಕೆಡಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಹರಿರಾಮ್ ಶಂಕರ್‌ ಎಚ್ಚರಿಕೆ

KannadaprabhaNewsNetwork | Published : Jun 3, 2025 12:10 AM
ಪಕ್ಕದ ದ.ಕ. ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಯಾಗಿದೆ. ಅದು ಉಡುಪಿ ಜಿಲ್ಲೆಯ ಮೇಲೆ ಪ್ರಭಾವ ಬೀರದಂತೆ ತಡೆಯುವುದದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸಂದೇಶಗಳನ್ನು ಪ್ರಕಟಿಸುವವರ ಮೇಲೆ ಮಾತ್ರವಲ್ಲದೇ, ಅವುಗಳ‍ನ್ನು ಹಂಚಿಕೊಳ್ಳುವವರ ಅಥವಾ ಬೇರೆಯವರೆಗೆ ಕಳುಹಿಸುವವ ಮೇಲೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ, ಅಕ್ರಮ ಚಟುವಟಿಕೆ, ಡ್ರಗ್ಸ್ ಜಾಲಕ್ಕೆ ಕಡಿವಾಣ

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ, ಕೋಮುಗಲಭೆಗಳಿಗೆ ಕಾರಣರಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸಾಮಾಜಿಕ ಜಾಲತಾಣಗಳ ಮೇಲೆಯೂ ತೀವ್ರ ನಿಗಾ ವಹಿಸಲಾಗುವುದು ಎಂದು ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.ಶುಕ್ರವಾರ ಅಧಿಕಾರ ಸ್ವೀಕರಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಕದ ದ.ಕ. ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಯಾಗಿದೆ. ಅದು ಉಡುಪಿ ಜಿಲ್ಲೆಯ ಮೇಲೆ ಪ್ರಭಾವ ಬೀರದಂತೆ ತಡೆಯುವುದದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಸಂದೇಶಗಳನ್ನು ಪ್ರಕಟಿಸುವವರ ಮೇಲೆ ಮಾತ್ರವಲ್ಲದೇ, ಅವುಗಳ‍ನ್ನು ಹಂಚಿಕೊಳ್ಳುವವರ ಅಥವಾ ಬೇರೆಯವರೆಗೆ ಕಳುಹಿಸುವವ ಮೇಲೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸೈಬರ್ ವಂಚನೆ - ದೂರು ನೀಡಿ:

ಜಿಲ್ಲೆಯಲ್ಲಿ ಸುಶಿಕ್ಷಿತರೇ ಹೆಚ್ಚು ಸೈಬರ್ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ, ಈ ಬಗ್ಗೆ ಜಾಗೃತಿ ಮೂಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಜಿಲ್ಲೆಯಲ್ಲಿ ಸೆನ್ ಠಾಣೆ ಮಾತ್ರವಲ್ಲದೆ ಪ್ರತಿ ಠಾಣೆಗಳಲ್ಲಿಯೂ ಸೈಬರ್ ವಂಚನೆಯ ದೂರಗಳನ್ನು ದಾಖಲಿಸಬಹುದು, ಸೈಬರ್ ವಂಚನೆಯ ಪ್ರಕರಣಗಳಲ್ಲಿ ಪೊಲೀಸಕರಿಗೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇಲ್ಲ, ಆದ್ದರಿಂದ ಸಂತ್ರಸ್ತರು ಯಾವುದೇ ಸಂಕೋಚವಿಲ್ಲದೇ ದೂರು ದಾಖಲಿಸಿ, ಸಕಾಲದಲ್ಲಿ ದೂರು ದಾಖಲಿಸಿದರೇ ವಂಚನೆಯನ್ನು ತಡೆಯುವುದಕ್ಕೆ ಸಾಧ್ಯವಿದೆ ಎಂದರು.ಪಿಪಿಪಿ ಮಾಡೆಲ್:

ಮನೆ ಕಳ್ಳತನದ ಪ್ರಕರಣಗಳನ್ನು ತಡೆಯಲು ಸಿಸಿ ಕ್ಯಾಮರಗಳನ್ನು ಅಳವಡಿಸುವುದರ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಆದರೆ ಕಳ್ಳರು ಸಿಸಿ ಕ್ಯಾಮರ, ಅದರ ಡಿವಿಆರ್ ಗಳನ್ನೇ ಕಳವು ಮಾಡುತ್ತಿರುವುದರಿಂದ ಅದನ್ನೇ ಅವಲಂಬಿಸಿ ಇರುವುದಕ್ಕಾಗುವುದಿಲ್ಲ. ಅನೇಕ ಮನೆಗಳಿರುವ ಬೀದಿ, ವಠಾರದ ಜನರು ಸೇರಿ ಸಿಸಿ ಕ್ಯಾಮರಗಳನ್ನು ಅ‍ಳವಡಿಸಿಕೊಳ್ಳಬಹುದು ಅಥವಾ ಪ್ರತಿ ತಿಂಗಳು ಸ್ವಲ್ಪ ಹಣ ಸಂಗ್ರಹಿಸಿ ಒಬ್ಬ ಕಾವಲುಗಾರನನ್ನು ನೇಮಿಸಬೇಕು, ಇಲಾಖೆ ಜೊತೆಗೆ ಜನರು ಪಿಪಿಪಿ ಮಾಡೆಲ್ ನಲ್ಲಿ ಕೆಲಸ ಮಾಡಿ ಮನೆ ಕಳ್ಳತನ ತಡೆಯಲು ಸಹಕರಿಸಬೇಕು ಎಂದರು.

ಡ್ರಗ್ಸ್ ಜಾಲ ವಿರುದ್ಧ ಅಭಿಯಾನ:

ಮಣಿಪಾಲದ ಶಿಕ್ಷಣ ಸಂಸ್ಥೆಗಳು ಮತ್ತು ಸುತ್ತಮುತ್ತ ಮಾದಕ ದ್ರವ್ಯ ಜಾಲಗಳ ಬಗ್ಗೆ ಅರಿವಿದೆ. ಹಿಂದಿನ ಎಸ್ಪಿ ಡಾ. ಅರುಣ್ ಈ ಜಾಲಕ್ಕೆ ಕಡಿವಾಣ ಹಾಕಿದ್ದಾರೆ. ಅದನ್ನು ಮುಂದುವರಿಸಲಾಗುತ್ತದೆ. ಈ ಬಗ್ಗೆ ಒಂದು ಅಭಿಯಾನವನ್ನೇ ನಡೆಸಲಾಗುತ್ತದೆ ಎಂದರು........................

ಮೊಬೈಲ್ 24 x 7 ಆನ್ ಇರುತ್ತದೆ

ಪೊಲೀಸ್ ಠಾಣೆಗಳು ಸಾರ್ವಜನಿಕರಿಗೆ ಮುಕ್ತವಾಗಿರಬೇಕು, ಠಾಣೆಗೆ ಬರುವುದಕ್ಕೆ ಸಾರ್ವಜನಿಕರು ಹೆದರುವಂತಿರಬಾರದು, ಆದರೆ ಕ್ರಮಿನಲ್ ಗಳು ಠಾಣೆಗೆ ಬರುವುದಕ್ಕೆ ಹೆದರುವಂತಿರಬೇಕು ಎಂದು ಎಸ್ಪಿ ಹರಿರಾಮ್ ಶಂಕರ್, ಯಾವುದೇ ಅಕ್ರಮ, ಕಾನೂನು ಬಾಹಿರ ವಿಷಯಗಳ ಮಾಹಿತಿಯಿದ್ದರೆ ಅದನ್ನು ಹಂಚಿಕೊಳ್ಳುವುದಕ್ಕೆ ತಮ್ಮ ಮೊಬೈಲ್ 24 ಗಂಟೆಯೂ ಲಭ್ಯ ಇದೆ ಎಂದರು.