ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಡವರ ಪರ ಅಪಾರ ಕಾಳಜಿ ಮತ್ತು ಜನ ಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು ಮೊದಲು ಉನ್ನತೀಕರಣ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದವರು ಎಂದು ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು ಉನ್ನತೀಕರಣ ಮಾಡಬೇಕು ಎಂದು ಘೋಷಣೆಯಾದಾಗ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ, ಬಡವರ ಆರೋಗ್ಯಕ್ಕೆ ಆಸ್ಪತ್ರೆ ಮೊದಲು ಉನ್ನತೀಕರಣವಾಗಲಿ ನಂತರದ ದಿನಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎನ್ನುವ ಅಭಿಪ್ರಾಯವನ್ನು ಮಂಡಿಸಿದ್ದರು. ಈ ಮೂಲಕ ಜನರ ಬಗ್ಗೆ ಅವರಿಗಿದ್ದ ಕಾಳಜಿ ತಿಳಿಯುತ್ತದೆ ಎಂದರು.
ವಿವಿಧ ಹಂತದ ರಾಜಕೀಯ ಸ್ಥಾನಮಾನ ಪಡೆದಾಗಲೂ ಅವರು ಶ್ರೀ ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆಕರ್ಷಣೆಯ ವ್ಯಕ್ತಿತ್ವ, ಉತ್ತಮ ವಿಚಾರವಂತ, ತಜ್ಞ, ರಾಜಕೀಯ ಪ್ರಭುದ್ವತೆ ಹೊಂದಿದ ರಾಜ್ಯದ ಅಪರೂಪದ ರಾಜಕಾರಣಿ ಎಸ್.ಬಂಗಾರಪ್ಪ ಅವರಾಗಿದ್ದಾರೆ ಎಂದರು.ಎಸ್.ಬಂಗಾರಪ್ಪ ಅವರು ರಾಜಕೀಯ ಒತ್ತಡಗಳ ನಡುವೆಯೂ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶಿವಮೊಗ್ಗದ ಪಂಡಿತ ಪುಟ್ಟರಾಜ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯಕ್ಕೆ ನಿವೇಶನ ದೊರಕಿಸಿಕೊಡಲು ಮತ್ತು ಪಾಠ ಶಾಲೆ ನಿರ್ಮಾಣವಾಗಲು ಬಂಗಾರಪ್ಪ ಅವರ ಕೊಡುಗೆ ಸಾಕಷ್ಟಿದೆ. ಈ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಶ್ರೀ ಪ್ರಭು ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ದಂತ ವೈದ್ಯ ಡಾ.ಎಚ್.ಇ.ಜ್ಞಾನೇಶ್, ತಾಪಂ ಮಾಜಿ ಸದಸ್ಯರಾದ ಜೆ.ಪ್ರಕಾಶ್ ಹಳೇಸೊರಬ, ಸುನೀಲ್ಗೌಡ, ಪಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರೀ, ಮುಖಂಡರಾದ ಪರಶುರಾಮ ಸಣ್ಣಬೈಲ್, ಯು.ಫಯಾಜ್ ಅಹ್ಮದ್, ನೆಹರು, ಕುಮಾರಸ್ವಾಮಿ ಮತ್ತಿತರರಿದ್ದರು.