ಗದಗ: ಕಳೆದ 8- 10 ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತಿ, ನಿಧನದಿಂದ ಖಾಲಿ ಆಗಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಮುಂತಾದ ನ್ಯಾಯಯುತ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಧಾರವಾಡದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ಹತ್ತಿಕ್ಕಿರುವ ಕ್ರಮ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವಂತಾಗಿದ್ದು, ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.
ರೈತರ ಕೋಪಕ್ಕೆ ಕಾಂಗ್ರೆಸ್ ಬಲಿಯಾಗಲಿದೆ: ಗೋವಿಂದಗೌಡ್ರ
ಗದಗ: ರಾಜ್ಯಾದ್ಯಂತ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ, ಧರಣಿಯಲ್ಲಿ ನಿರತರಾದರೂ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ನಿರ್ಲಕ್ಷಿಸುತ್ತಿರುವುದು ಘೋರ ಅಪರಾಧವೆಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಸರ್ಕಾರದ ಅವಧಿಯಲ್ಲಿ ರೈತರು ಸಂಕಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಕುರ್ಚಿ ಕಾದಾಟಕ್ಕೆ ರೈತ ಸಮುದಾಯವನ್ನು ಸಂಕಟಕ್ಕೆ ದೂಡಿದೆ. ರೈತರು ರಾಜ್ಯಾದ್ಯಂತ ಬೆಂಬಲ ಬೆಲೆಗಳನ್ನು ಘೋಷಿಸಿ, ಖರೀದಿ ಕೇಂದ್ರವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಧರಣಿ ಹಾಗೂ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಸಂಬಂಧಪಟ್ಟ ಮಂತ್ರಿಗಳಾಗಲಿ, ಸರ್ಕಾರದ ಪ್ರತಿನಿಧಿಯಾಗಲಿ ರೈತರ ಸಂಕಟವನ್ನು ಕೇಳುವ ಸೌಜನ್ಯ ಇಲ್ಲದಾಗಿದೆ. ಅದೇ ರೀತಿ ಅರೆಕಾಲಿಕ ಉಪನ್ಯಾಸಕರು ಕೂಡ ಧರಣಿಯಲ್ಲಿ ಧರಣಿ ನಡೆಸುತ್ತಾ 10 ದಿನ ಕಳೆದರೂ ಅವರ ಸಮಸ್ಯೆಗೆ ಕಿವಿಗೊಡಲು ಸಮಯವಿಲ್ಲ. ಆದರೆ ಬ್ರೇಕ್ ಫಾಸ್ಟ್, ಡಿನ್ನರ್ ಮೀಟಿಂಗ್ ಅಂತ ಕಾಲಹರಣ ಮಾಡುತ್ತಿದ್ದು, ಈ ಕಾಂಗ್ರೆಸ್ ಸರ್ಕಾರ ಶಿಕ್ಷಕರನ್ನು ಭಿಕ್ಷುಕರಂತೆ ಕಾಣುತ್ತಿದೆ ಎಂದಿದ್ದಾರೆ. ಕೂಡಲೇ ಎಚ್ಚೆತ್ತು ರೈತರು, ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.