ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಜೆಎಂಎಫ್ಸಿನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಹರಿಣಿ ಅವರ ಸಮ್ಮುಖದಲ್ಲಿ ನ್ಯಾಯಾಲಯದ ಜಾರಿದಾರರಾದ ಎಂ.ಪಿ.ತ್ರಿವೇಣಿ, ವಿ.ಶಿವರಾಂ, ರವಿ, ಸಿಬ್ಬಂದಿ ವರ್ಗ ಮತ್ತು ಪ್ರಕರಣದ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಬಿ.ರಾಮಕೃಷ್ಣೇಗೌಡ, ಸಹಾಯಕ ಟಿ. ಜೆ.ಸುನಿಲ್ ಕುಮಾರ್ ಅವರುಗಳ ಸಮ್ಮುಖದಲ್ಲಿ ಮರಳಿಗ ಗ್ರಾಮ ಕಚೇರಿಯಿಂದ ಜಪ್ತಿ ಮಾಡಲಾಗಿದ್ದ ಕಂಪ್ಯೂಟರ್, ಪೀಠೋಪಕರಣ, ಫ್ಯಾನ್ ಸೇರಿದಂತೆ ಹಲವು ವಸ್ತುಗಳನ್ನು 46, 960 ರು. ಹರಾಜು ಮಾಡಲಾಯಿತು.
ಮೊದಲ ಹಂತದಲ್ಲಿ ನ್ಯಾಯಾಲಯದ ಆದೇಶದಂತೆ ಪಾವತಿಸಬೇಕಾಗಿದ್ದ 4,24,840 ರು.ಗಳಲ್ಲಿ ಪೀಠೋಪಕರಣಗಳ ಹರಾಜಿನಿಂದ ಬಂದ ಹಣವನ್ನು ಪರಿಹಾರ ಮೊತ್ತಕ್ಕೆ ಜಮಾ ತೆಗೆದುಕೊಂಡು ಉಳಿದ ಬಾಕಿ ವಸೂಲಾತಿಗೆ ಮುಂದಿನ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯ ಆದೇಶ ನೀಡಿದೆ.ಮರಳಿಗ ಗ್ರಾಮ ಪಂಚಾಯತಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ರವಿ ಕಳೆದ 2009ರ ನವೆಂಬರ್ 21ರಂದು ಲೈನ್ ದುರಸ್ತಿ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ಅಸು ನೀಗಿದ್ದರು. ತಮ್ಮ ಪತಿ ರವಿ ಸಾವಿಗೆ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರ ನಿರ್ಲಕ್ಷ ಕಾರಣ ಎಂದು ಆರೋಪಿಸಿ ಆತನ ಪತ್ನಿ ಸುಜಾತ ಪರಿಹಾರ ಕೋರಿ ಹಿಂದೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಪಿಡಿಒ ಹಾಗೂ ಜನಪ್ರತಿನಿಧಿಗಳು ಸುಜಾತಾಳಿಗೆ ಪರಿಹಾರ ನೀಡಲು ನಿರಾಕರಿಸಿದ್ದರು.
ಇದರಿಂದ ಬೇಸತ್ತ ಸುಜಾತ ತಮ್ಮ ಪರ ವಕೀಲ ಬಿ. ರಾಮಕೃಷ್ಣೇಗೌಡ, ಸಹಾಯಕ ಟಿ.ಜೆ.ಸುನಿಲ್ ಕುಮಾರ್ ಮೂಲಕ ಮದ್ದೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅಂತಿಮವಾಗಿ ಸತತ ಹದಿನಾರು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಮೊದಲ ಹಂತದಲ್ಲಿ ಮೃತ ರವಿ ಕುಟುಂಬಕ್ಕೆ 4,24,840 ರು. ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ನ್ಯಾಯಾಲಯದ ಆದೇಶಕ್ಕೆ ಕಿಂಚೆತ್ತು ಮನ್ನಣೆ ನೀಡದ ಗ್ರಾಪಂ, ಪಿಡಿಒ ಸುಜಾತ ತಮ್ಮ ಪರ ವಕೀಲರ ಮೂಲಕ ಅರ್ಜಿ ಸಲ್ಲಿಸಿ ಪರಿಹಾರದ ಹಣ ಕಟ್ಟಲು ನಿರಾಕರಿಸಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು. ಅಂತಿಮವಾಗಿ ಪಿಡಿಒ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶ ಎಂ.ಎಸ್.ಹರಿಣಿ ಅವರು ಗ್ರಾಮ ಪಂಚಾಯ್ತಿ ಎಲ್ಲಾ ಆಸ್ತಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದ್ದರು.