ಕೋಟೆ ನಾಡಲ್ಲಿ ಕೇಸರಿ ಶಕ್ತಿ ಪ್ರದರ್ಶನ...! ಮಸೀದಿ ಕಾಣದಂತೆ ಬೃಹತ್ ಪರದೆ

KannadaprabhaNewsNetwork |  
Published : Mar 02, 2026, 03:15 AM IST
RSS

ಸಾರಾಂಶ

ಬಾಗಲಕೋಟೆ, ಶಿವಾಜಿ ಮಹಾರಾಜರ ಜಯಂತಿ ವೇಳೆ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದಂತಹ ಘಟನೆಯ ನಡುವೆಯೇ ಆರ್‌ಎಸ್‌ಎಸ್‌ ಕೋಟೆ ನಾಡಿನಲ್ಲಿ ಭಾನುವಾರ ಭವ್ಯ ಕೇಸರಿ ಶಕ್ತಿ ಪ್ರದರ್ಶನ ನಡೆಸಿತು.

 ಬಾಗಲಕೋಟೆ :  ಇತ್ತೀಚೆಗಷ್ಟೇ ಶಿವಾಜಿ ಮಹಾರಾಜರ ಜಯಂತಿ ವೇಳೆ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದಂತಹ ಘಟನೆಯ ನಡುವೆಯೇ ಆರ್‌ಎಸ್‌ಎಸ್‌ ಕೋಟೆ ನಾಡಿನಲ್ಲಿ ಭಾನುವಾರ ಭವ್ಯ ಕೇಸರಿ ಶಕ್ತಿ ಪ್ರದರ್ಶನ ಏರ್ಪಡಿಸಿತ್ತು. ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರ ತೀವ್ರ ಕಟ್ಟೆಚ್ಚರ ಹಾಗೂ ಬಿಗಿ ಭದ್ರತೆ ನಡುವೆ ಶೋಭಾಯಾತ್ರೆ ನಿರಾತಂಕವಾಗಿ ಜರುಗಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದ ಹಿನ್ನೆಲೆ ನಗರದಲ್ಲಿ ಭಾನುವಾರ ಹಿಂದೂ ಸಮ್ಮೇಳನ ನಿಮಿತ್ತ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ನಗರದ ವೆಂಕಟಪೇಟೆಯಲ್ಲಿ ಬರುವ ಪಾಂಚಜನ್ಯ ಶಾಖಾ ಸಂಘಸ್ಥಾನ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕಿಲ್ಲಾ ಕೊತ್ತಲೇಶ ದೇವಸ್ಥಾನ, ಟಾಂಗಾ ಸ್ಟ್ಯಾಂಡ್, ಎಂ.ಜಿ.ರೋಡ್‌, ಬಸವೇಶ್ವರ ಸರ್ಕಲ್ ಮೂಲಕ ಬಸವೇಶ್ವರ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಭವ್ಯ ಶೋಭಾಯಾತ್ರೆಯಲ್ಲಿ ಸಕಲ ಸಮಾಜ ಮಹಾಪುರುಷರ ಸ್ತಬ್ಧಚಿತ್ರ, ಮಕ್ಕಳ ವೇಷ ಭೂಷಣ, ಡೋಳ್ಳು ಕುಣಿತ, ಹಲಗೆ ಮತ್ತು ಕರಡಿ ಮಜಲು ಹಾಗೂ ಸ್ವದೇಶಿ ವಾದ್ಯಗಳೊಂದಿಗೆ ಶೋಭಾಯಾತ್ರೆ ಜರುಗಿತು..

ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ಚಪ್ಪಲಿ ಎಸೆತ ಪ್ರಕರಣದ ನಂತರದಲ್ಲಿ ಉದ್ವಿಗ್ನಗೊಂಡಿದ್ದ ಹಳೆ ಬಾಗಲಕೋಟೆ ಶೋಭಾಯಾತ್ರೆಯಲ್ಲಿ ಕೈಗೊಂಡ ಹಲವು ಮುಂಜಾಗ್ರತಾ ಕ್ರಮಗಳು ಗಮನ ಸೆಳೆದವು. ಮಾತ್ರವಲ್ಲ, ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಶೋಭಾಯಾತ್ರೆ ನಿರಾತಂಕವಾಗಿ ಜರುಗಿತು.

ಪಂಕಾ ಮಸೀದಿ ಕಾಣದಂತೆ ಬೃಹತ್ ಪರದೆ:

ಪಂಕಾ ಮಸೀದಿ ಹಾಗೂ ಮುಂಭಾಗದ ಮುಸ್ಲಿಂ ಸಮಾಜದವರಿಗೆ ಸೇರಿದ ಅಂಗಡಿಗಳು ಕಾಣದಂತೆ ಪೊಲೀಸರು ಬೃಹತ್ ಪರದೆ ಹಾಕಿದ್ದರು. ಶೋಭಾಯಾತ್ರೆಗೆ ನಗರದ ವೆಂಕಟಪೇಟೆ ವೆಂಕಟೇಶ್ವರ ದೇವಸ್ಥಾನದಿಂದ ಗೋ ಪೂಜೆ ಮಾಡುವ ಮೂಲಕ ಚಾಲನೆ ದೊರೆಯಿತು. ಮಹಾಪುರುಷರ ಸ್ತಬ್ಧಚಿತ್ರ, ಮಕ್ಕಳ ವೇಷಭೂಷಣ, ಕರಡಿ ಮಜಲು, ಹಲಗೆ ಮಜಲು, ಡೊಳ್ಳು ಕುಣಿತ ಸೇರಿ ಸ್ವದೇಶಿ ವಾದ್ಯಗಳು, ಗಮನ ಸೆಳೆದವು. ಸಮ್ಮೇಳನ ಹಿನ್ನೆಲೆ ಮುಳುಗಡೆ ನಗರಿ. ಕೇಸರಿಮಯವಾಗಿತ್ತು. ನಗರದಲ್ಲಿ ಕೇಸರಿ ಕಮಾನ್ ಗಳು, ಬ್ಯಾನರ್ ಬಂಟಿಂಗ್ಸ್‌ಗಳ ಭರಾಟೆ ಎದ್ದು ಕಾಣುತ್ತಿದ್ದವು.

ಅಂದಾಜು 5000ಕ್ಕೂ ಅಧಿಕ ಜನಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದರು. ಪಂಕಾ ಮಸೀದಿ ಮುಂಭಾಗದಲ್ಲೇ ಭರ್ಜರಿ ಮೆರವಣಿಗೆ ಜರುಗಿತು. ಈ ವೇಳೆ ಬಸವೇಶ್ವರ ವೇಷಧಾರಿ ಮೆರವಣಿಗೆಯಲ್ಲಿ ಎದ್ದು ಕಂಡಿತು. ಜತೆಗೆ ಸಾವಿರಾರು ಮಹಿಳೆಯರಿಂದ ಕುಂಭ ಹೊತ್ತು ಮೆರವಣಿಗೆ ಕೂಡ ನಡೆಯಿತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಸದ್ದಿನಲ್ಲಿ ಹಿಂದುಪರ ಘೋಷಣೆ ಹಾಕುತ್ತ ಹಿಂದೂ ಕಾರ್ಯಕರ್ತರು ಹೊರಟರಲ್ಲದೆ, ಮಸೀದಿ ಮುಂಭಾಗ ಕೇಸರಿ ಶಾಲು ತೂರುತ್ತ ಭರ್ಜರಿ ಕುಣಿದರು.

ಹೆಚ್ಚುವರಿ ಬಿಗಿ ಪೋಲಿಸ ಭದ್ರತೆ: 

ಪಂಕಾ ಮಸೀದಿ, ಕೊತ್ತಲೇಶ್ವರ ದೇವಸ್ಥಾನ, ಎಂಜಿ ರಸ್ತೆ ವಲ್ಲಭಭಾಯಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಹಳೆ ಬಾಗಲಕೋಟೆಯಲ್ಲಿ ಹೆಚ್ಚುವರಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಬಾಗಲಕೋಟೆಯಲ್ಲಿ ಹಿಂದೂ ವಿರಾಟ್ ಸಮ್ಮೇಳನ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆಯು ವಿವಾದಿತ ಪಂಕಾ ಮಸೀದಿ ಬಳಿ ಬಂದಾಗ ದೇಶಭಕ್ತಿ ಘೋಷಣೆ ಕೂಗುತ್ತಾ ಹಿಂದೂ ಯುವಕರು ಸಂಭ್ರಮಿಸಿದರು, ಪಂಕಾ ಮಸೀದಿ ಬಳಿ ಪೊಲೀಸ್‌ ಸರ್ಪಗಾವಲು ಹಾಕಿದ್ದರು. ಅಂಬಾಭವಾನಿ ದೇಗುಲ ನಂತರ ಪಂಕಾ ಮಸೀದಿ ದಾಟಿ ಶೋಭಾಯಾತ್ರೆ ಮುನ್ನಡೆಯಿತು. ಯಾತ್ರೆಯಲ್ಲಿ ಸಂಸದ ಪಿ.ಸಿ ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಹಲವರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೊಸರಲ್ಲಿ ಕಲ್ಲು ಹುಡುಕುವ ಯತ್ನ : ಬಿ.ವೈ.ವಿಜಯೇಂದ್ರ
ವೈಜ್ಞಾನಿಕವಾಗಿ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು - ಜನಸಂಖ್ಯೆ ಆಧಾರದಲ್ಲಿ ಮಾಡಿದರೆ ಅನ್ಯಾಯ