ಹುಬ್ಬಳ್ಳಿ: ಎಸ್ಎಸ್ಕೆ ಸಮಾಜದ ಕುಲಪುರುಷ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಬುಧವಾರ ಸಹಸ್ರಾರ್ಜುನರ ಬೆಳ್ಳಿ ಮೂರ್ತಿಯ ಬೃಹತ್ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಸಹಸ್ರಾರ್ಜುನ ಬೆಳ್ಳಿ ಮೂರ್ತಿಯ ಮೆರವಣಿಗೆ ದಾಜಿಬಾನಪೇಟೆಯ ತುಳಜಾಭವಾನಿ ದೇವಸ್ಥಾನದ ಮುಂಭಾಗದಿಂದ ಹೊರಟು ಸಂಗೊಳ್ಳಿ ರಾಯಣ್ಣ ವೃತ್ತ, ಮಹಾನಗರ ಪಾಲಿಕೆ ಮಾರ್ಗವಾಗಿ ಕೊಪ್ಪಿಕರ ರಸ್ತೆ, ದುರ್ಗದ ಬೈಲ್, ಕಾಳಮ್ಮನ ಅಗಸಿ, ಮಹಾವೀರ ಓಣಿಯಿಂದ ಶ್ರೀ ಸೀತಾಬಾಯಿ ಹಬೀಬ ಕಲ್ಯಾಣ ಮಂಡಪ ಮಾರ್ಗವಾಗಿ ಮರಳಿ ತುಳಜಾ ಭವಾನಿ ದೇವಸ್ಥಾನದ ಬಳಿ ಬಂದು ಮುಕ್ತಾಯಗೊಂಡಿತು.
ಅವಳಿ ನಗರದಲ್ಲಿ ಹೆಚ್ಚನ ಪ್ರಮಾಣದಲ್ಲಿ ಇರುವ ಎಸ್ಎಸ್ಕೆ ಸಮಾಜದ ಸದಸ್ಯರಲ್ಲಿ ಬಹುತೇಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪುರುಷರು ಕೇಸರಿ ರುಮಾಲುಗಳಲಿ ಕಂಗೊಳಿಸಿದರೆ, ಜರಿ ಸೀರೆಯುಟ್ಟು ಮಹಿಳೆಯರು ಸಂಭ್ರಮಿಸಿದರು. ವಿವಿಧ ಪೌರಾಣಿಕ ಪಾತ್ರಗಳ ವೇಷ ಧರಿಸಿ ಮಕ್ಕಳು ಗಮನ ಸೆಳೆದರು.ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಮುಖ್ಯ ಟ್ರಸ್ಟಿ ಸತೀಶ ಮಹರವಾಡೆ, ಎಸ್ಎಸ್ಕೆ ಸಮಾಜದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅಶೋಕ ಕಾಟವೆ, ಗೌರವ ಕಾರ್ಯದರ್ಶಿ ನಾರಾಯಣ ಖೋಡೆ, ಉಪ ಮುಖ್ಯ ಧರ್ಮದರ್ಶಿಗಳಾದ ಕಿರಣ ಪೂಜಾರಿ, ರಂಗಾ ಬದ್ದಿ, ಸಂಚಾಲಕ ಸಾಯಿನಾಥ ದಲಬಂಜನ, ವಿಠ್ಠಲ ಲದ್ವಾ ಸೇರಿದಂತೆ ಹಲವರಿದ್ದರು.