ಸನಾತನ ಧರ್ಮ ಎಂದೂ ಅಳಿಸಲಾಗಲ್ಲ: ರಾಧಾಕೃಷ್ಣನ್‌

KannadaprabhaNewsNetwork |  
Published : Mar 06, 2026, 02:15 AM IST
ಚಿಕ್ಕೋಡಿ ತಾಲೂಕಿನ ಯಡಬರಿನ ಶ್ರೀ ಕ್ಷೇತ್ರ ಯಡೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಉದ್ಘಾಟಿಸಿದರು | Kannada Prabha

ಸಾರಾಂಶ

ಸನಾತನ ಧರ್ಮ ಕಾಲದ ಪರೀಕ್ಷೆಗೆ ಒಳಗಾಗಬಹುದು. ಆದರೆ ಅದನ್ನು ಎಂದಿಗೂ ಅಳಿಸಿ ಹಾಕಲು ಸಾಧ್ಯವಿಲ್ಲ. ಭಾರತ ಕೇವಲ ಒಂದು ರಾಷ್ಟ್ರವಲ್ಲ. ಜೀವಂತ ನಾಗರಿಕತೆ. ಹಿಂದೂ ಚೇತನವು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಜೀವನ ಶೈಲಿ ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸನಾತನ ಧರ್ಮ ಕಾಲದ ಪರೀಕ್ಷೆಗೆ ಒಳಗಾಗಬಹುದು. ಆದರೆ ಅದನ್ನು ಎಂದಿಗೂ ಅಳಿಸಿ ಹಾಕಲು ಸಾಧ್ಯವಿಲ್ಲ. ಭಾರತ ಕೇವಲ ಒಂದು ರಾಷ್ಟ್ರವಲ್ಲ. ಜೀವಂತ ನಾಗರಿಕತೆ. ಹಿಂದೂ ಚೇತನವು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಜೀವನ ಶೈಲಿ ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶ್ರೀ ಕ್ಷೇತ್ರ ಯಡೂರಿನಲ್ಲಿ ನಡೆದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಕಲಶಾರೋಹಣ ಮತ್ತು ಮಹಾಕುಂಭಾಭಿಷೇಕ ಸಮಾರಂಭದಲ್ಲಿ ಅವರು ಮಾತನಾಡಿದರು. ಇದೊಂದು ಆತ್ಮೀಯ ಪುನರುಜ್ಜೀವನ ಮತ್ತು ನಾಗರಿಕತೆಯ ಪುನರ್ ದೃಢೀಕರಣದ ಕ್ಷಣ ಎಂದ ಉಪ ರಾಷ್ಟ್ರಪತಿ, ಸಿಂಧೂ ಕಣಿವೆಯಿಂದ ಕನ್ಯಾಕುಮಾರಿ ತನಕ ನಿರಂತರವಾಗಿ ಹರಿಯುವ ಚೇತನದ ಪ್ರವಾಹವೇ ಭಾರತ ಎಂದು ಹೇಳಿದರು.

ಈ ಪವಿತ್ರ ಭೂಮಿಯಲ್ಲಿ ವೇದಗಳ ನಿತ್ಯ ಜ್ಞಾನ ಮೊದಲು ಕೇಳಿ ಬಂತು. ಭಗವದ್ಗೀತೆಯ ಮಹತ್ವದ ಸಂದೇಶವು ಧೈರ್ಯದಿಂದ ಕಾರ್ಯ ನಿರ್ವಹಿಸಲು, ಧರ್ಮ ಪರವಾಗಿ ಬದುಕಲು ಮತ್ತು ಭಕ್ತಿಯಿಂದ ಶರಣಾಗಲು ಮಾನವ ಕುಲಕ್ಕೆ ಇಂದಿಗೂ ಮಾರ್ಗದರ್ಶನ ನೀಡುತ್ತಿದೆ. ಹಿಂದೂ ಚೇತನವು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಜೀವನಶೈಲಿಯಾಗಿದೆ ಎಂದು ಹೇಳಿದರು.

ವಿಶ್ವವೇ ಒಂದು ಕುಟುಂಬ ಎನ್ನುವ ವಸುದೈವ ಕುಟುಂಬಕಂ ಎಂಬ ಶಾಶ್ವತ ತತ್ವವನ್ನು ಭಾರತ ಜಗತ್ತಿಗೆ ನೀಡಿದೆ. ಪ್ರಕೃತಿಯಲ್ಲಿ, ಪ್ರತಿಯೊಬ್ಬ ಮಾನವನಲ್ಲಿ ದೈವತ್ವವನ್ನು ಕಾಣುವ ಆಧ್ಯಾತ್ಮಿಕ ದೃಷ್ಟಿ ಭಾರತದ್ದು. ವೀರಶೈವ-ಲಿಂಗಾಯತ ಪರಂಪರೆ, ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ವೀರಶೈವ ಮಠಗಳು ಮತ್ತು ದೇವಾಲಯಗಳು ಭಕ್ತಿ, ಸೇವೆ ಮತ್ತು ಸಾಮಾಜಿಕ ಸೌಹಾರ್ದತೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.

ಇದೇ ವೇಳೆ ಅವರು ಕಾಡಸಿದ್ಧೇಶ್ವರ ಮಠದ ಶಿವಯೋಗಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ದೃಷ್ಟಿಗೆ ಗೌರವ ಸಲ್ಲಿಸಿದರು. ಕಾಲಕ್ರಮೇಣ ಮರೆಯಾಗಿದ್ದ ಈ ಪವಿತ್ರ ಕ್ಷೇತ್ರವನ್ನು ಪುನಃ ಪತ್ತೆ ಹಚ್ಚಿ ಪುನರುಜ್ಜೀವನಗೊಳಿಸುವ ಮೂಲಕ ಸನಾತನ ಧರ್ಮದ ನಿತ್ಯ ಜ್ಯೋತಿಯನ್ನು ಅವರು ಪುನರುಜ್ಜೀವನಗೊಳಿಸಿದರು ಎಂದು ಅಭಿಪ್ರಾಯಪಟ್ಟರು.

ಕಾಡಸಿದ್ಧೇಶ್ವರ ಮಠದ ಅನುವಂಶಿಕ ಪೀಠಾಧಿಪತಿಗಳು ನಿತ್ಯ ಪೂಜೆಯ ಆಚರಣೆಗಳು, ಪುನರ್ ನಿರ್ಮಾಣ ಕಾರ್ಯಗಳು ಮತ್ತು ಆಧ್ಯಾತ್ಮಿಕ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವುದಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಜೊತೆಗೆ ಪರಂಪರೆಯೂ ಇರಬೇಕು ಎಂಬ ಧೋರಣೆಯನ್ನು ಉಲ್ಲೇಖಿಸಿ ಭಾರತ ಇಂದು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ, ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಹಾಗೂ ಜಾಗತಿಕವಾಗಿ ಪ್ರಭಾವಿ ರಾಷ್ಟ್ರವಾಗುತ್ತಿರುವುದರ ಜೊತೆಗೆ ತನ್ನ ನಾಗರಿಕತೆಯ ಮೌಲ್ಯಗಳನ್ನು ದೃಢವಾಗಿ ಉಳಿಸಿಕೊಂಡಿದೆ ಎಂದು ಅವರು ಹೇಳಿದರು.

ರಾಜಗೋಪುರ ಉದ್ಘಾಟನೆ ಕೇವಲ ಕಟ್ಟಡ ನಿರ್ಮಾಣದ ಕಾರ್ಯಕ್ರಮವಲ್ಲ. ಅದು ಭಕ್ತಿ ಪರಂಪರೆ ಮತ್ತು ಸಂಸ್ಕೃತಿಯ ನಿರಂತರತೆಯ ಪುನರ್ ದೃಢೀಕರಣವಾಗಿದೆ. ಪವಿತ್ರ ಕ್ಷೇತ್ರಗಳ ಪುನರುಜ್ಜೀವನವು ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತ ಜೀವನದ ಅವಿಭಾಜ್ಯ ಅಂಗ : ರಂಭಾಪುರಿ ಶ್ರೀ
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಡಾ.ನಾಗಲಕ್ಷ್ಮಿ ಚೌಧರಿ