ಸಂಡೂರು: ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ಆದಿ ಜಾಂಬವ ಮಹಾಸಭಾದ ತಾಲೂಕು ಘಟಕ, ಒಳ ಮೀಸಲಾತಿ ಪರ ಇರುವ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಸಂಡೂರು ಬಂದ್ ಯಶಸ್ವಿಯಾಗಿದೆ.
ಪಟ್ಟಣದ ವಿಜಯ ವೃತ್ತದಲ್ಲಿ ಸಭೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಜಿ.ಅನಿಲ್ಕುಮಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಆದಿ ಜಾಂಬವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಐಹೊಳೆ, ಒಳ ಮೀಸಲಾತಿಗಾಗಿ ೩೫ ವರ್ಷಗಳಿಂದ ದೀರ್ಘವಾದ ಹೋರಾಟ ನಡೆದಿದೆ. ಸರ್ವೋಚ್ಚ ನ್ಯಾಯಾಲಯವು ೨೦೨೪ರ ಆ.೧ರಂದು ನೀಡಿದ ತೀರ್ಪಿನಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಸಮರ್ಪಕವಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು. ಒಂದು ವೇಳೆ ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿಯನ್ನು ಅನುಸರಿಸಿದಲ್ಲಿ ತಾಲೂಕಿನ ಮಾದಿಗ ಸಮುದಾಯದಿಂದ ಉಗ್ರ ಹೋರಾಟ ಮಾಡುವುದರ ಜೊತೆಗೆ ಮುಂದೆ ನಡೆಯುವ ಎಲ್ಲ ಹಂತದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದರ ಮೂಲಕ ಉತ್ತರಿಸಬೇಕಾಗುತ್ತದೆ ಎಂದರು.ಒಳ ಮೀಸಲಾತಿ ಇಲ್ಲದೆ ೫೬,೪೩೨ ಉದ್ಯೋಗ ನೇಮಕಾತಿಗೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಒಳ ಮೀಸಲಾತಿ ಅಳವಡಿಸಿ ಶೇ.೧೫ ಮೀಸಲಾತಿಯಲ್ಲಿ ಉದ್ಯೋಗ ನೇಮಕಾತಿ ಮಾಡಲಿ. ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ, ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನ ಕೈಬಿಡಬೇಕು. ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಲಿ. ಪರಿಶಿಷ್ಟ ಜಾತಿಗೆ ಶೇ.೧೭, ಪರಿಶಿಷ್ಟ ವರ್ಗಕ್ಕೆ ಶೇ.೭ರಷ್ಟು ಒಟ್ಟು ಶೇ.೫೬ ಮೀಸಲಾತಿಯನ್ನು ಸಂವಿಧಾನದ ೯ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು ಎಂದರು.
ಮುಖಂಡರಾದ ಎಚ್.ತಾಯಪ್ಪ, ಮಲ್ಲೇಶ ಕಮತೂರು, ಎಚ್.ದುರುಗಮ್ಮ, ಎಚ್.ಕುಮಾರಸ್ವಾಮಿ, ಸತೀಶ್ ಹೆಗಡೆ, ಆರ್.ಕೆ. ಹೆಗಡೆ ಮಾತನಾಡಿ, ಮಾದಿಗ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸಮಾಜದ ಮುಖಂಡರು ಒಳ ಮೀಸಲಾತಿಗಾಗಿ ೩೫ ವರ್ಷಗಳಿಂದ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಶುಕ್ರವಾರ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಬೇಕು. ತಪ್ಪಿದಲ್ಲಿ ಮಾದಿಗ ಹಾಗೂ ಒಳ ಮೀಸಲಾತಿ ಪರವಿರುವ ಎಲ್ಲ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.